ಗಾರ್ಡನ್ ಸ್ವಚ್ಛ ಮಾಡಲು ಹೇಳಿದ್ದಕ್ಕೆ ಮಚ್ಚಿನಿಂದ ಹಲ್ಲೆ ನಡೆಸಿದ ಲೈನ್‍ಮ್ಯಾನ್

Update: 2019-06-14 18:28 GMT

ಹಾಸನ, ಜೂ.14: ಇಲಾಖೆಯ ಗಾರ್ಡನ್ ಅನ್ನು ಸ್ವಚ್ಛ ಮಾಡುವಂತೆ ಆದೇಶಿಸಿದ್ದಕ್ಕೆ ಲೈನ್‍ಮ್ಯಾನ್ ಓರ್ವ ಸೆಸ್ಕಾಂ ಸಹಾಯಕ ಕಾರ್ಯಪಾಲಕೆ ಮಹಿಳಾ ಇಂಜಿನಿಯರ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಘಟನೆ ಹಾಸನ ನಗರದ ಸಂತೇಪೇಟೆ ಬಳಿ ಇರುವ ವಿದ್ಯುತ್ ವಿತರಣಾ ಕೆಂದ್ರದಲ್ಲಿ ಶುಕ್ರವಾರ ಮದ್ಯಾಹ್ನ ನಡೆದಿದೆ. 

ಸ್ಟೇಷನ್ ಅಟೆಂಡೆಂಟ್ ಮಂಜುನಾಥ್ ಎಂಬುವನೇ ಮಚ್ಚಿನಿಂದ ಸೆಸ್ಕಾಂ ಎಇಇ ಸ್ವಾತಿ ದೀಕ್ಷಿತ್ ಎಂಬುವರ ಮೇಲೆ ಹಲ್ಲೆ ಮಾಡಿದವನು. ಸಂತೆಪೇಟೆ ವಿದ್ಯುತ್ ವಿತರಣಾ ಕೇಂದ್ರದ ಗಾರ್ಡನ್ ಸ್ವಚ್ಛಗೊಳಿಸುವಂತೆ ಸ್ವಾತಿ ಅವರು ಮಂಜುನಾಥ್‍ಗೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ಮಂಜುನಾಥ್, ಸ್ವಾತಿ ಅವರ ಮೇಲೆ ಏಕಾಏಕಿ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ತಡೆಯಲು ಬಂದ ಸಹೋದ್ಯೋಗಿ ವೆಂಕಟೇಗೌಡನಿಗೂ ಕೂಡ ಮಚ್ಚಿನೇಟು ಬಿದ್ದಿವೆ.

ಹಲ್ಲೆಯಿಂದ ಸ್ವಾತಿ ಅವರಿಗೆ ಗಂಭೀರ ಗಾಯಗಳಾಗಿದ್ದು, ಎರಡು ಬೆರಳು ತುಂಡಾಗಿದೆ. ಸದ್ಯ ಹಲ್ಲೆಗೊಳಗಾದ ಸಿಬ್ಬಂದಿ ಹಾಗೂ ಮಹಿಳಾ ಎಂಜಿನಿಯರ್ ಇಬ್ಬರನ್ನು ಹಾಸನದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಈ ಸಂಬಂಧ ಆರೋಪಿ ಮಂಜುನಾಥ್ ವಿರುದ್ಧ ದೂರು ದಾಖಲಾಗಿದ್ದು, ನಗರ ಠಾಣೆ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮುಂದುವರೆಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News