ನಿರಾಶ್ರಿತರಿಗೆ ಕಟ್ಟಿ ಕೊಟ್ಟ ಮನೆಗಳ ಬಗ್ಗೆ ನಟಿ ಹರ್ಷಿಕಾಗೆ ಏನು ಗೊತ್ತು: ಸಚಿವ ಸಾ.ರಾ.ಮಹೇಶ್ ಪ್ರಶ್ನೆ

Update: 2019-06-16 17:26 GMT

ಮೈಸೂರು,ಜೂ.16: ನಟಿ ಹರ್ಷಿಕಾ ಪೂಣಚ್ಚ ಸಿನಿಮಾ ಬಗ್ಗೆ ಮಾತನಾಡಿದ್ದರೆ ಒಪ್ಪಿಕೊಳ್ಳುತ್ತಿದ್ದೆ, ಕೊಡಗಿನಲ್ಲಿ ನಿರಾಶ್ರಿತರಿಗೆ ಕಟ್ಟಿರುವ ಮನೆಗಳ ಬಗ್ಗೆ ಅವರಿಗೇನು ಗೊತ್ತು ಎಂದು ಪ್ರವಾಸೋದ್ಯಮ ಮತ್ತು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ತಿರುಗೇಟು ನೀಡಿದರು.

ನಗರದಲ್ಲಿ ರವಿವಾರ ನಡೆದ ಯೋಗ ದಿನಾಚರಣೆ ಅಂಗವಾಗಿ ನಡೆದ ಪೂರ್ವಾಭ್ಯಾಸದಲ್ಲಿ ಭಾಗವಹಿಸಿ ಇತ್ತೀಚೆಗೆ ನಟಿ ಹರ್ಷಿಕಾ ಪೂಣಚ್ಚ ರಾಜ್ಯ ಸರ್ಕಾರ ಕೊಡಗಿನ ನಿರಾಶ್ರಿತರಿಗೆ ಸರಿಯಾಗಿ ಮನೆ ನಿರ್ಮಿಸಿಲ್ಲ ಎಂಬ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು.

ನಟಿ  ಹರ್ಷಿಕಾ ಪೂಣಚ್ಚ ಏನು ಓದಿದ್ದಾರೆ, ಅವರು ಸಿನಿಮಾ ಬಗ್ಗೆ ಮಾತನಾಡಿದ್ದರೆ ಒಪ್ಪಿಕೊಳ್ಳುತಿದ್ದೆ. ಅವರು ಯಾವಾಗ ತಾಂತ್ರಿಕ ತಜ್ಞರಾದರು ಎಂದು ಖಾರವಾಗಿ ಪ್ರಶ್ನಿಸಿದರು. ಮನೆ ಹೇಗೆ ನಿರ್ಮಾಣ ಮಾಡಬೇಕು ಎಂಬುದರ ಬಗ್ಗೆ ಅವರಿಗೆ ಗೊತ್ತಿದೆಯಾ? ರಾಜ್ಯ ಸರ್ಕಾರ ಕೊಡಗಿನಲ್ಲಿ ಒಳ್ಳೆಯ ಗುಣಮಟ್ಟದ ಮನೆಗಳನ್ನು ನಿರ್ಮಿಸಿಕೊಟ್ಟಿದೆ ಎಂದು ಸಮರ್ಥಿಸಿಕೊಂಡರು.

ಕೊಡಗಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆರಂಭದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಜಿಲ್ಲೆಯಲ್ಲಿ ಆಸ್ಪತ್ರೆ ಇದೆ. ಇರುವ ಆಸ್ಪತ್ರೆ ಅಭಿವೃದ್ದಿಗೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News