ಪತ್ನಿಯ ಶೀಲ ಶಂಕಿಸಿ ಕೊಲೆ ಪ್ರಕರಣ: ಆರೋಪಿ ಪತಿಗೆ ಜೀವಾವಧಿ ಶಿಕ್ಷೆ
Update: 2019-06-17 18:13 GMT
ಮಂಡ್ಯ, ಜೂ.17: ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿದ್ದ ಆರೋಪಿ ಪತಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ತಾಲೂಕಿನ ಹಳೇಬೂದನೂರು ಗ್ರಾಮದ ಮಂಗಯ್ಯ ನಗರದ ನಿವಾಸಿ ತಂಗವೇಲು ಪುತ್ರ ನಾಗೇಶ ಶಿಕ್ಷೆಗೆ ಗುರಿಯಾದವ. ಈತ ಪತ್ನಿ ಆಶಾಳನ್ನು ಕೊಲೆಗೈದಿದ್ದ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
2015ರ ಜನವರಿ 28 ರಂದು ಆರೋಪಿ ನಾಗೇಶ, ತನ್ನ ಮನೆಯಲ್ಲಿ ಪತ್ನಿ ಆಶಾಳ ಜತೆ ಜಗಳ ತೆಗೆದು ಮರದ ಪಟ್ಟಿಯಿಂದ ಹೊಡೆದು, ಚಾಕುವಿನಿಂದ ಆಕೆಯ ಕತ್ತನ್ನು ಕೊಯ್ದು ಕೊಲೆ ಮಾಡಿದ್ದ ಆರೋಪವಿತ್ತು.
ಪೊಲೀಸರು ವಿಚಾರಣೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿದ್ದರು. ಆರೋಪ ಸಾಬೀತಾದ್ದರಿಂದ ನ್ಯಾಯಾಧೀಶೆ ಎಚ್.ಬಿ.ವಿಜಯಕುಮಾರಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಅಭಿಯೋಜನೆ ಪರವಾಗಿ ಸರಕಾರಿ ಅಭಿಯೋಜಕ ಎಚ್.ಇ.ಚಿನ್ನಪ್ಪ ವಾದ ಮಂಡಿಸಿದ್ದರು.