ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯಕ್ಕೆ ಘೇರಾವ್: ರೈತಸಂಘ ಮುಖಂಡ ಶಾಂತಸ್ವಾಮಿ ಮಠ ಎಚ್ಚರಿಕೆ

Update: 2019-06-18 16:18 GMT

ಬಾಗಲಕೋಟೆ, ಜೂ.18: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೈಗೊಳ್ಳಲಿರುವ ಗ್ರಾಮವಾಸ್ತವ್ಯ ಕಾರ್ಯಕ್ರಮಗಳಿಗೆ ಘೇರಾವ್ ಹಾಕಲಾಗುವುದು ಎಂದು ರಾಜ್ಯ ರೈತ ಸಂಘದ ಮುಖಂಡ ಶಾಂತಸ್ವಾಮಿ ಮಠ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಸ್ತವ್ಯ ಹೂಡಿದ್ದ ಗ್ರಾಮಗಳು ಯಾವ ಸ್ಥಿತಿಯಲ್ಲಿ ಎಂಬುದನ್ನು ಗಮನಿಸಲಿ. ಆ ಗ್ರಾಮಗಳಲ್ಲಿ ಗುರುತರವಾದ ಯಾವ ಬದಲಾವಣೆಯೂ ಆಗಿಲ್ಲ. ಹೀಗಾಗಿ ಮುಖ್ಯಮಂತ್ರಿಗಳು ಇಂತಹ ಕಾರ್ಯಕ್ರಮಗಳನ್ನು ಕೈಬಿಟ್ಟು, ರೈತರ ಸಮಸ್ಯೆಗಳ ಕಡೆಗೆ ಗಮನ ವಹಿಸಬೇಕು ಎಂದು ಹೇಳಿದರು.

ರೈತರು ಹಲವು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕಬ್ಬಿನ ಕಾರ್ಖಾನೆಗಳಿಂದ ರೈತರಿಗೆ ಬರಬೇಕಾಗಿರುವ ಬಾಕಿ ಹಣ ಬಂದಿಲ್ಲ. ಕೃಷಿ ಬೆಳಗಳಿಗೆ ವೈಜ್ಞಾನಿಕ ಬೆಲೆಯಿಲ್ಲದೆ ಇಂದಿಗೂ ಅದೃಷ್ಟವನ್ನೆ ನಂಬಿ ಜೀವಿಸಬೇಕಾದ ದುಸ್ಥಿತಿ ಬಂದಿದೆ. ಇವೆಲ್ಲವುಗಳ ಕಡೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆದ್ಯತೆ ನೀಡಲಿ ಎಂದು ಅವರು ಹೇಳಿದರು.

ರಾಯಚೂರಿನಲ್ಲಿ ಘೇರಾವ್: ಎಸ್ಟಿ ಸಮುದಾಯದ ಮೀಸಲು ಹೆಚ್ಚಳ ಹಾಗೂ ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ ನಿರ್ಲಕ್ಷ್ಯ ತೋರುತ್ತಿರವ ಮೈತ್ರಿ ಸರಕಾರದ ಧೋರಣೆ ಖಂಡಿಸಿ ಜೂ.21ರಂದು ಎಚ್.ಡಿ.ಕುಮಾರಸ್ವಾಮಿಗೆ ಘೇರಾವ್ ಹಾಕಲಾಗುವುದು ಎಂದು ವಾಲ್ಮೀಕಿ ನಾಯಕ ರಘುವೀರ ನಾಯಕ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News