ಗುಡ್ಡದ ಮನೆಗಳಿಗೆ ಮಡಿಕೇರಿ ನಗರಸಭೆ ನೋಟಿಸ್: ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ

Update: 2019-06-18 17:55 GMT

ಮಡಿಕೇರಿ, ಜೂ.18: ಪ್ರಸಕ್ತ ಸಾಲಿನ ಮಳೆಗಾಲದಲ್ಲಿ ಸಂಭವಿಸಬಹುದಾದ ಪ್ರಕೃತಿ ವಿಕೋಪದಿಂದ ಪಾರಾಗುವ ನಿಟ್ಟಿನಲ್ಲಿ ತಾತ್ಕಾಲಿಕವಾಗಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನಗರದ ಇಂದಿರಾನಗರ, ಚಾಮುಂಡೇಶ್ವರಿ ನಗರ ಹಾಗೂ ಮಂಗಳಾದೇವಿ ನಗರ ಬಡಾವಣೆಗಳ ನಿವಾಸಿಗಳಿಗೆ ನಗರಸಭೆ ನೋಟಿಸ್ ಜಾರಿ ಮಾಡಿದ್ದು, ಸ್ಥಳೀಯರಲ್ಲಿ ಆತಂಕ ಎದುರಾಗಿದೆ. ಈಗಾಗಲೇ ಮಳೆಯ ಆತಂಕದ ನಡುವೆಯೇ ಕಾಲ ಕಳೆಯುತ್ತಿರುವ ಈ ನಗರಗಳ ಜನತೆ, ಇದೀಗ ಮನೆ ಖಾಲಿ ಮಾಡಿ ಸುರಕ್ಷಿತ ಸ್ಥಳಕ್ಕೆ ತೆರಳಿ ಎಂದರೆ ಎಲ್ಲಿಗೆ ತೆರಳುವುದೆಂದು ತೋಚದೆ ಕಂಗಾಲಾಗಿದ್ದಾರೆ.

ಕಳೆದ ಬಾರಿಯ ಜಲಪ್ರಳಯಕ್ಕೆ ಕೊಡಗು ಜಿಲ್ಲೆ ಅಕ್ಷರಶಃ ನಲುಗಿ ಹೋಗಿತ್ತು. ಅವುಗಳಲ್ಲಿ ಮಡಿಕೇರಿ ನಗರದ ಈ ಮೂರು ವಾರ್ಡ್‌ಗಳು ಹೆಚ್ಚು ಅನಾಹುತಕ್ಕೆ ತುತ್ತಾಗಿದ್ದವು. ಅದರ ಕರಾಳ ನೆನೆಪು ಮಾಸುವ ಮುನ್ನವೇ ಮತ್ತೊಂದು ಮಳೆಗಾಲ ಆರಂಭವಾಗಿದ್ದು, ನಗರಸಭೆ ನೀಡಿರುವ ನೋಟಿಸ್ ಅಪಾಯದ ಸ್ಥಳದಲ್ಲಿರುವ ಜನರನ್ನು ಮತ್ತಷ್ಟು ಆತಂಕಕ್ಕೆ ಈಡು ಮಾಡಿದೆ.

ಈ ಮೂರು ನಗರಗಳಲ್ಲಿ ಬೆಟ್ಟ, ಗುಡ್ಡದ ನಡುವೆಯೇ ನೂರಾರು ಮನೆಗಳಿವೆ. ಕಳೆದ ಮಳೆಗಾಲದಲ್ಲಿ ಅರ್ಧ ಬಿದ್ದು, ಅಪಾಯದಂಚಿನಲ್ಲಿರುವ ಮನೆಗಳಲ್ಲೇ ಜನರು ಬದುಕು ಕಟ್ಟಿಕೊಂಡಿದ್ದಾರೆ. ಇದೀಗ ನಗರಸಭೆಯ ನೋಟಿಸ್ ಅವರಿಗೆ ಮತ್ತೊಂದು ಶಾಕ್ ನೀಡಿದ್ದು, ಮುಂದೇನು ಮಾಡಬೇಕೆಂದು ತಿಳಿಯದೆ ಜನರು ಭಯದಿಂದ ಕಾಲ ಕಳೆಯುತ್ತಿದ್ದಾರೆ.

ನೋಟಿಸ್ ಹೀಗಿದೆ: 2018ನೇ ಸಾಲಿನಲ್ಲಿ ಮಳೆಗೆ ಆದ ನಷ್ಟ, ತೊಂದರೆಗಳು ಮರುಕಳಿಸದೇ ಇರಲು ಅಪಾಯ ಸ್ಥಿತಿಯಲ್ಲಿರುವ ಸ್ಥಳ, ಮನೆ, ಎತ್ತರದ ಪ್ರದೇಶದಲ್ಲಿರುವ ಮನೆಗಳು, ಇಳಿಜಾರು ಬೆಟ್ಟದ ಕೆಳಗೆ ಇರುವ ಮನೆಗಳು, ಮರಗಳ ಕೆಳಭಾಗದಲ್ಲಿ ಇರುವ ಮನೆಗಳಲ್ಲಿ ವಾಸವಿರುವವರು ಸುರಕ್ಷತೆಯ ದೃಷ್ಟಿಯಿಂದ ಮಳೆಗಾಲದ ಅವಧಿಯಲ್ಲಿ ತಾತ್ಕಾಲಿಕವಾಗಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವ ಅಗತ್ಯವಿದೆ. ಸದ್ಯ ನೀವು ವಾಸವಾಗಿರುವ ಸ್ಥಳ ಮಳೆ, ಗಾಳಿ ಹಾಗೂ ಹವಾಮಾನ ವೈಪರೀತ್ಯದಿಂದ ವಾಸಿಸಲು ಯೋಗ್ಯವಿಲ್ಲದ ಕಾರಣ ಪ್ರಾಣ ಹಾನಿಯನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ನೀವು ವಾಸಿಸುತ್ತಿರುವ ಸ್ಥಳವನ್ನು ತೆರವುಗೊಳಿಸುವುದು. ಈ ಸೂಚನೆಯನ್ನು ಪಾಲಿಸದ ಪಕ್ಷದಲ್ಲಿ ಮುಂದೇ ಆಗುವ ಕಷ್ಟ ನಷ್ಟಗಳಿಗೆ ನೀವೇ ಜವಾಬ್ದಾರರಾಗುತ್ತೀರಿ ಎಂದು ನಗರಸಭೆ ನೀಡಿರುವ ನೋಟೀಸ್‌ನಲ್ಲಿ ಎಚ್ಚರಿಸಲಾಗಿದೆ.

ಆತಂಕ: ಮಳೆಯ ಆತಂಕ, ಕಳೆದ ವರ್ಷದ ಕರಾಳ ನೆನಪು ಮಾಸುವ ಮುನ್ನವೇ ಮತ್ತೊಂದು ಮಳೆ ಎದುರಿಸಬೇಕಾದ ನೋವಿನ ನಡುವೆ ಜನರಿದ್ದಾರೆ. ನೋಟಿಸ್ ಪಡೆದುಕೊಂಡ ಮಂದಿ ಸುರಕ್ಷಿತ ಸ್ಥಳಕ್ಕಾಗಿ ಹುಡುಕಾಡುತ್ತಿದ್ದಾರೆ. ಜಿಲ್ಲಾಡಳಿತ ಮನೆ ಖಾಲಿ ಮಾಡುವವರನ್ನು ಬೀದಿಗೆ ಬಿಡದೆ ತಾತ್ಕಾಲಿಕವಾಗಿಯಾದರೂ ಸೂರು ನೀಡಬೇಕು ಎಂದು ಸ್ಥಳೀಯರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

ಅಪಾಯದಂಚಿನಲ್ಲಿರುವ ಮನೆಗಳಿಗೆ ವರ್ಷ ವರ್ಷ ನೋಟಿಸ್ ನೀಡಲಾಗುತ್ತದೆ. ಕಳೆದ ಬಾರಿ ಹೆಚ್ಚು ಮಳೆಯಾಗಿ ಅಧಿಕ ಹಾನಿಯುಂಟಾಗಿದೆ. ಈ ಬಾರಿ ಹೀಗಾಗದಿರಲಿ ಎಂದು ಮುಂಚಿತವಾಗಿಯೇ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ ಎನ್ನುತ್ತಾರೆ ಪೌರಾಯಕ್ತ ರಮೇಶ್.

ಈ ಮೂರು ಬಡಾವಣೆಗಳಲ್ಲಿ 630ಕ್ಕೂ ಅಧಿಕ ಮನೆ ಗಳಿವೆ. ಆದರೆ ಅಪಾಯದಂಚಿನಲ್ಲಿರುವ ಮನೆಗಳಿಗೆ ಸುರಕ್ಷತೆ ದೃಷ್ಟಿಯಿಂದ ಮಾತ್ರ ನೋಟಿಸ್ ನೀಡಲಾಗುತ್ತಿದೆ. ಹೆಚ್ಚು ಮಳೆ ಬಂದರೆ ನಿರಾಶ್ರಿತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ರಮೇಶ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News