ತುಮಕೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾ.ಪಂ. ನೌಕರರಿಂದ ಧರಣಿ

Update: 2019-06-19 12:22 GMT

ತುಮಕೂರು,ಜೂ19: ಗ್ರಾಮ ಪಂಚಾಯತ್ ಸಿಬ್ಬಂದಿಗಳ ವೇತನವನ್ನು ನಿಗದಿತ ಸಮಯಕ್ಕೆ ನೀಡಬೇಕು ಮತ್ತು ಕನಿಷ್ಟ ವೇತನ ಪಾವತಿ, ಇಎಫ್‍ಎಂಎಸ್ ಅಳವಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಗ್ರಾ.ಪಂ. ನೌಕರರು ಸಿಐಟಿಯು ನೇತೃತ್ವದಲ್ಲಿ ತುಮಕೂರಿನಲ್ಲಿ ಧರಣಿ ನಡೆಸಿದರು.

ಟೌನ್‍ಹಾಲ್ ವೃತ್ತದಿಂದ ಜಿಲ್ಲಾ ಪಂಚಾಯತ್ ಕಚೇರಿವರೆಗೆ ಮೆರವಣಿಗೆ ನಡೆಸಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭ ಮಾತನಾಡಿದ ಗ್ರಾಮ ಪಂಚಾಯತ್ ನೌಕರರ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ, ಪಂಚಾಯತ್ ಸಿಬ್ಬಂದಿಗಳಿಗೆ 2018 ಮಾರ್ಚ್ ತಿಂಗಳಿಂದ ಇಲ್ಲಿಯವರೆಗೆ ಬಾಕಿ ಉಳಿಸಿಕೊಂಡಿರುವ ವೇತನ ಪೂರ್ಣವಾಗಿ ಪಾವತಿಸಬೇಕು. ಕೈಬಿಟ್ಟ ಹೋದ ನೌಕರರ ವಿವರವನ್ನು ಪಂಚತಂತ್ರದಲ್ಲಿ ಅಳವಡಿಸಲು ಉಪಕಾರ್ಯದರ್ಶಿಯವರು ಕ್ರಮ ಕೈಗೊಳ್ಳಬೇಕು ಹಾಗೂ ವೇತನವನ್ನು ಮಾರ್ಚ್ 1, 2018ರಿಂದ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಗ್ರಾ.ಪಂ ಸಿಬ್ಬಂದಿಗಳಿಗೆ 2018 ಮಾರ್ಚ್ ತಿಂಗಳಿಗೂ ಹಿಂದೆ ಉಳಿಸಿಕೊಂಡಿರುವ ಹಿಂದಿನ ವೇತನವನ್ನು ಪಂಚಾಯತ್ ನಿಧಿಯಿಂದ ಪಾವತಿಸಬೇಕು. ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗೆ ಅರ್ಹ ಸಿಬ್ಬಂದಿಗಳಿಗೆ ಭಡ್ತಿ ನೀಡಬೇಕು. ಗ್ರಾ.ಪಂ ನೌಕರರನ್ನು ಸಿ ಮತ್ತು ಡಿ ದರ್ಜೆ ನೌಕರರೆಂದು ಪರಿಗಣಿಸಿ ವೇತನ ಶ್ರೇಣಿ ನೀಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಪಂಚಾಯತ್ ಹಂತದಲ್ಲಿರುವ ಕೆಲಸಗಳನ್ನು ಜುಲೈ 15ರೊಳಗೆ ಕಾರ್ಯಗತಗೊಳಿಸದೇ ಹೋದರೆ ಮುಂದೆ ಎಲ್ಲಾ ನೌಕರರು ಜಿಲ್ಲಾ ಪಂಚಾಯತ್ಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು. ಇಎಫ್‍ಎಂಎಸ್ ತಂತ್ರಾಂಶದಲ್ಲಿ ಸೇರ್ಪಡೆ ಗೊಳ್ಳದ ಸಿಬ್ಬಂದಿಗಳನ್ನು ಕೂಡಲೇ ಇಎಫ್‍ಎಂಎಸ್‍ಗೆ ಅಳವಡಿಸಬೇಕು. ಗ್ರಾ.ಪಂ ಸಿಬ್ಬಂದಿಗಳ ವೇತನಕ್ಕೆ ಬೇಕಾದ ಅನುದಾನವನ್ನು ಸರ್ಕಾರ ಭರಿಸಿ ತಿಂಗಳಿಗೆ ಸರಿಯಾಗಿ ವೇತನ ನೀಡಬೇಕು. ಅಪರ ಕಾರ್ಯದರ್ಶಿ ಸ್ವಾಮಿ ವರದಿಯಂತೆ ಬಾಕಿ ಇರುವ ಎಲ್ಲಾ ನೌಕರರನ್ನು ಏಕ ಕಾಲದಲ್ಲಿ ಅನುಮೋದನೆ ನೀಡಬೇಕು ಎಂದರು.

ನೌಕರರ ಸಂಘದ ಉಪಾಧ್ಯಕ್ಷ ಗೋಪಾಲಕೃಷ್ಣ ಹರಳಹಳ್ಳಿ ಮಾತನಾಡಿ, ಅನುಮೋದನೆಗೊಂಡ ಎಲ್ಲಾ ನೌಕರರಿಗೆ ಸರ್ಕಾರದ ಆದೇಶದ ಪ್ರಕಾರ ಜೇಷ್ಟತೆ ಪಟ್ಟಿ ಮಾಡಿ ಬಡ್ತಿ ನೀಡಲು 2019ರ ಪವಿತ್ರ ಕೇಸಿನಲ್ಲಿ ಸುಪ್ರೀಂಕೋರ್ಟ್‍ನ ತೀರ್ಪು ಬಂದಿರುವುದರಿಂದ ಪಿ.ಡಿ.ಓ ಭಡ್ತಿ ಗ್ರೇಡ್ 1 ಭಡ್ತಿ ನೀಡಿ, ಖಾಲಿಯಾದ ಗ್ರೇಡ್ 2 ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕ ಹುದ್ದೆಗೆ ಬಿಲ್‍ಕಲೆಕ್ಟರ್ ಮತ್ತು ಡಾಟಾ ಎಂಟ್ರಿ ಆಪರೇಟರ್ ಗಳನ್ನು ನೇಮಕಾತಿ ಮಾಡುವಂತಾಗಬೇಕು. ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಗಳನ್ನು ಬಡ್ತಿಗೆ ಪರಿಗಣಿಸಬೇಕು. ಪಂಚಾಯತ್ ನ ಎಲ್ಲಾ ನೌಕರರಿಗೂ ಭವಿಷ್ಯನಿಧಿ, ಆರೋಗ್ಯ ವಿಮೆ, ನಿವೃತ್ತಿ ವೇತನ, ಜನಶ್ರೀ ವಿಮಾ ಯೋಜನೆ, ರಜೆ ಸೌಲಭ್ಯ, ಸೇವಾ ನಿಯಮಾವಳಿ, ಸೇವಾ ಪುಸ್ತಕ ಮುಂತಾದ ಸೌಲಭ್ಯಗಳನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧ್ಯಕ್ಷ ಎನ್.ಕೆ.ಸುಬ್ರಮಣ್ಯ ಮಾತನಾಡಿ, ಗ್ರಾ.ಪಂ.ಯಲ್ಲಿ ದುಡಿಯುತ್ತಿರುವ ಎಲ್ಲಾ ನೌಕರರಿಗೂ ಪ್ರತಿ ತಿಂಗಳು ವೇತನ ನೀಡಬೇಕು. ಏಕಕಾಲಕ್ಕೆ ನೌಕರರ ಅನುಮೋದನೆಯಾಗಬೇಕು. ಪಿಎಫ್, ಇಎಸ್‍ಐ ಜಾರಿಯಾಗಬೇಕು. ಬಿಲ್ ಕಲೆಕ್ಟರ್ ಮತ್ತು ಕಂಪ್ಯೂಟರ್ ಆಪರೇಟರ್ ಗಳ ಜೇಷ್ಟತಾ ಪಟ್ಟಿಯನ್ನು ತಯಾರಿಸಲು ಜಿಲ್ಲಾ ಪಂಚಾಯತ್ ಕ್ರಮ ಕೈಗೊಳ್ಳಬೇಕು ಎಂದು 

ಪ್ರತಿಭಟನೆಯಲ್ಲಿ ಕೊರಟಗೆರೆಯ ನಾಗಭೂಷಣ್, ಚಿಕ್ಕನಾಯಕನಹಳ್ಳಿ ಶಂಕರಪ್ಪ ಮತ್ತು ಲೋಕೇಶ್, ತಿಪಟೂರು ರಾಜು, ರವಿ, ತುರುವೇಕೆರೆಯ ರಮೇಶ್, ಪಾವಗಡದ ಸಿದ್ದೇಶ್ವರಪ್ಪ, ಸುಬ್ಬರಾಯಪ್ಪ, ಮಧುಗಿರಿಯ ಲಕ್ಷ್ಮೀಪತಿ, ಸುಬ್ರಹ್ಮಣ್ಯ, ಶಿರಾದ ಬಾಲರಾಜು ಮುದ್ದುರಾಜು, ಗುಬ್ಬಿಯ ಬಷೀರ್ ಅಹಮದ್, ತುಮಕೂರು ತಾಲೂಕಿನ ಅಧ್ಯಕ್ಷ ಎಸ್.ಎಸ್. ಪಂಚಾಕ್ಷರಯ್ಯ, ಕಾರ್ಯದರ್ಶಿ ಚಂದ್ರಯ್ಯ, ಕುಣಿಗಲ್‍ನ ಶ್ರೀನಿವಾಸ್ ಮತ್ತು ಪ್ರಕಾಶ್ , ಕಂಪ್ಯೂಟರ್ ಆಪರೇಟರ್ ಗಳಾದ ಎಚ್. ಗಂಗಣ್ಣ, ಮೋಹನ್‍ಕುಮಾರ್, ದಯಾನಂದ್, ರಾಜು, ಬಿಲ್‍ ಕಲೆಕ್ಟರ್ ಗಳು, ವಾಟರ್ ಮೆನ್‍ಗಳು, ಜವಾನರು, ಸ್ವಚ್ಛತಾಗಾರರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News