ಚಿಕ್ಕಮಗಳೂರು: ಒಂದು ತಿಂಗಳ ಹೆಣ್ಣು ಮಗುವಿನ ಕತ್ತು ಹಿಸುಕಿ ಕೊಲೆಗೈದ ತಂದೆ

Update: 2019-06-19 16:00 GMT

ಚಿಕ್ಕಮಗಳೂರು, ಜೂ.19: ಹೆಣ್ಣು ಮಗು ಹುಟ್ಟಿದ್ದಕ್ಕೆ ಕುಪಿತಗೊಂಡ ತಂದೆಯೊಬ್ಬ ತನ್ನ 1 ತಿಂಗಳ ಹೆಣ್ಣು ಮಗುವಿನ ಕತ್ತು ಹಿಸುಕಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ತಾಲೂಕಿ ಬೂಚೇನಹಳ್ಳಿ ಕಾವಲ್ ಗ್ರಾಮದಲ್ಲಿ ವರದಿಯಾಗಿದೆ.

ಹಾಸನ ಜಿಲ್ಲೆಯ ನರಸೀಪುರ ಗ್ರಾಮದ ಮಂಜುನಾಥ್ ಭೋವಿಯೇ ತನ್ನ ಹೆತ್ತ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿದ ಆರೋಪಿಯಾಗಿದ್ದು, ಪತ್ನಿ ಸುಪ್ರೀತಾ ನೀಡಿದ ದೂರಿನ ಮೇರೆಗೆ ಚಿಕ್ಕಮಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆಂದು ತಿಳಿದು ಬಂದಿದೆ.

ಮಂಜುನಾಥ್ ಬೋವಿ ಚಿಕ್ಕಮಗಳೂರು ತಾಲೂಕು ಸಿಂದಿಗೆರೆ ಗ್ರಾಪಂ ವ್ಯಾಪ್ತಿಯ ಬೂಚೇನಹಳ್ಳಿ ಕಾವಲ್ ಗ್ರಾಮದ ಸುಪ್ರೀತಾಳನ್ನು 1 ವರ್ಷದ ಹಿಂದೆ ವಿವಾಹವಾಗಿದ್ದು, ಇತ್ತೀಚೆಗೆ ಈ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಬಾಣಂತಿ ಆರೈಕೆ ಹಿನ್ನೆಲೆಯಲ್ಲಿ ಸುಪ್ರೀತಾ ಬೂಚೇನಹಳ್ಳಿ ಕಾವಲ್‍ನ ತನ್ನ ತಾಯಿ ಮನೆಯಲ್ಲಿ ನೆಲೆಸಿದ್ದು, ಬುಧವಾರ ಬೆಳಗ್ಗೆ ಸುಪ್ರಿತಾ ಪೋಷಕರು ಕೆಲಸಕ್ಕೆ ಹೋಗಿದ್ದ ವೇಳೆ ಮಗುವನ್ನು ಮಂಜುನಾಥ್ ಬಳಿ ಬಿಟ್ಟಿದ್ದ ಸುಪ್ರಿತಾ ಪಾತ್ರೆ ತೊಳೆಯಲು ಮನೆಯಿಂದ ಹೊರಬಂದಿದ್ದರು. ಈ ವೇಳೆ ಮಂಜುನಾಥ್ 1 ತಿಂಗಳ ಹೆಣ್ಣು ಮಗುವನ್ನು ಹತ್ಯೆ ಮಾಡಿದ್ದಾನೆಂದು ಆರೋಪಿಸಲಾಗಿದೆ.

ಮಂಜುನಾಥ್ ಸಹೋದರರಿಗೂ ಹೆಣ್ಣು ಮಕ್ಕಳಿದ್ದು, ಗಂಡು ಮಕ್ಕಳಿಲ್ಲದ ಕಾರಣಕ್ಕೆ ಮನೆಯಲ್ಲಿ ಹಲವು ಬಾರಿ ಮಂಜುನಾಥ್ ಮನೆಯಲ್ಲಿ ಜಗಳ ನಡೆದಿತ್ತು. ತನಗೂ ಹೆಣ್ಣು ಮಗು ಆಗಿದ್ದರಿಂದ ಕುಪಿತಗೊಂಡಿದ್ದ ಮಂಜುನಾಥ್ ಆಗಾಗ್ಗೆ ಪತ್ನಿಯೊಂದಿಗೆ ಜಗಳ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.

ಬುಧವಾರ ಮಗು ಮೃತಪಟ್ಟಿದ್ದನ್ನು ಗಮನಿಸಿದ ಸುಪ್ರಿತಾ ಗ್ರಾಮಸ್ಥರಿಗೆ ತಿಳಿಸಿ ನಂತರ ಆಸ್ಪತ್ರೆಗೆ ಮಗುವನ್ನು ಕರೆತಂದಿದ್ದಾರೆ. ಈ ವೇಳೆ ಮಗುವಿನ ಕುತ್ತಿಗೆಯಲ್ಲಿ ಹಿಸುಕಿದ್ದ ಗುರುತುಗಳಿದ್ದ ಬಗ್ಗೆ ವೈದ್ಯರು ದೃಢಪಡಿಸಿದ್ದಾರೆಂದು ತಿಳಿದು ಬಂದಿದೆ.

ಅಲ್ಲದೇ, ಪತ್ನಿ ಹಾಗೂ ಆಕೆಯ ಪೋಷಕರಿಗೆ ಮಂಜುನಾಥ್ ಕೊಲೆ ಬೆದರಿಕೆ ಹಾಕಿದ್ದರಿಂದ ಮಗುವನ್ನು ಗ್ರಾಮದಲ್ಲಿ ಹೂಳಲಾಗಿತ್ತು. ಆದರೆ ಘಟನೆಯಿಂದ ಬೇಸರಗೊಂಡಿದ್ದ ಸುಪ್ರಿತಾ ಗ್ರಾಮಾಂತರ ಠಾಣೆಗೆ ದೂರು ನೀಡಿದ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಮಗುವಿನ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News