ನಿಷ್ಠಾವಂತ ಹಿಂದೂ ಕಾರ್ಯಕರ್ತರಿಗೆ ಬಿಜೆಪಿ, ಸಂಘಪರಿವಾರ ಬೆಂಬಲ ನೀಡುವುದಿಲ್ಲ: ಪ್ರಮೋದ್ ಮುತಾಲಿಕ್
Update: 2019-06-20 14:37 GMT
ಚಿಕ್ಕಮಗಳೂರು, ಜೂ.20: ಮುಂದಿನ ದಿನಗಳಲ್ಲಿ ರಾಜಕೀಯದಿಂದ ದೂರ ಸರಿಯಲಿದ್ದೇನೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಇಂದಿಲ್ಲಿ ಹೇಳಿದ್ದಾರೆ.
ಇಂದಿಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜಕೀಯದ ಸಹವಾಸ ಸಾಕಾಗಿದೆ, ಅದರ ಸಹವಾಸವೇ ಬೇಡ ಎಂದಂತಾಗಿದೆ. ಆದುದರಿಂದ ಇನ್ನು ಮುಂದೆ ಯಾವುದೇ ಕಾರಣಕ್ಕೂ ರಾಜಕೀಯ ಮಾಡಲ್ಲ, ಚುನಾವಣೆಗೂ ನಿಲ್ಲುವುದಿಲ್ಲ ಎಂದಿದ್ದಾರೆ.
ಹಣ, ಜಾತಿ ಹಾಗೂ ಲಾಬಿ ಮಾಡುವ ಶಕ್ತಿಯಿದ್ದರೆ ಅಷ್ಟೇ ರಾಜಕೀಯದಲ್ಲಿ ಬೆಳೆಯಲು ಸಾಧ್ಯವಾಗುತ್ತದೆ, ಇಲ್ಲದಿದ್ದರೆ ಬಲು ಕಷ್ಟ. ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ಗೆದ್ದರೂ ಯಾರಿಗೂ ನೆರವು ನೀಡಲು ಸಾಧ್ಯವಿಲ್ಲ ಎಂದ ಅವರು, ನಿಷ್ಠಾವಂತ ಹಿಂದೂ ಪರ ಕಾರ್ಯಕರ್ತರಿಗೆ ಬಿಜೆಪಿ ಹಾಗೂ ಸಂಘಪರಿವಾರ ಬೆಂಬಲ ನೀಡುವುದಿಲ್ಲ. ರಾಜಕೀಯವಾಗಿ ಬೇಸರವಾಗಿದ್ದು, ಮುಂದೆ ಇದರಿಂದ ದೂರವಿರಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ.