ಐಎಂಎ ವಂಚನೆ ಪ್ರಕರಣ: ಪ್ರಧಾನಿ ಮೋದಿ, ಅಮಿತ್ ಶಾ ಮೊರೆ ಹೋದ ಹೂಡಿಕೆದಾರರು
ಬೆಂಗಳೂರು, ಜೂ.20: ಐಎಂಎ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯ ಒದಗಿಸುವಂತೆ ಕೋರಿ ಹೂಡಿಕೆದಾರರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಮೊರೆ ಹೋಗಿದ್ದಾರೆ.
ನಮಗೆ ನ್ಯಾಯ ಸಿಗಬೇಕಾದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಯೇ ಆಗಬೇಕೆಂದು ಮನವಿ ಮಾಡಿ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ಗೆ ಹೂಡಿಕೆದಾರರು ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.
ಈ.ಡಿ. ಸಮನ್ಸ್: ಐಎಂಎ ಸಂಸ್ಥೆ ಅಧ್ಯಕ್ಷ ಮುಹಮ್ಮದ್ ಮನ್ಸೂರ್ ಖಾನ್ಗೆ ಜೂ.24ರಂದು ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಗುರುವಾರ ಜಾರಿ ನಿರ್ದೇಶನಾಲಯ(ಈಡಿ)ದ ಪ್ರಾದೇಶಿಕ ನಿರ್ದೇಶಕ ಬಸವರಾಜು ಸಮನ್ಸ್ ಜಾರಿ ಮಾಡಿದ್ದಾರೆ.
ವಿಚಾರಣೆಗೆ ಹಾಜರಾಗುವಾಗ ಭಾವಚಿತ್ರ, ಪಾನ್ಕಾರ್ಡ್, ಪಾಸ್ಪೋರ್ಟ್, ಆಧಾರ್ ಕಾರ್ಡ್ ಸೇರಿದಂತೆ ಭಾರತೀಯ ಗುರುತಿನ ಚೀಟಿಗಳನ್ನು ತರುವಂತೆ ಸೂಚಿಸಿ, ಶಿವಾಜಿನಗರದಲ್ಲಿರುವ ಐಎಂಎ ಕಚೇರಿ ಗೋಡೆ ಮೇಲೆ ಈಡಿ ಅಧಿಕಾರಿಗಳು ಸಮನ್ಸ್ ಪ್ರತಿಯನ್ನು ಅಂಟಿಸಿದ್ದಾರೆ.