4 ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ ಪ್ರಕರಣ: ಕೋಟ್ಯಂತರ ಮೌಲ್ಯದ ಆಸ್ತಿ ಪತ್ತೆ

Update: 2019-06-22 15:03 GMT

ಬೆಂಗಳೂರು, ಜೂ.22: ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ ಸೇರಿ ನಾಲ್ಕು ಅಧಿಕಾರಿಗಳ ಕಚೇರಿ, ನಿವಾಸದ ಮೇಲೆ ಎಸಿಬಿ ದಾಳಿ ನಡೆಸಿದ ಪ್ರಕರಣ ಸಂಬಂಧ, ಕೋಟ್ಯಂತರ ಮೌಲ್ಯದ ಆಸ್ತಿ ಪತ್ತೆಯಾಗಿದೆ.

ಅಸಮತೋಲನ ಆಸ್ತಿ-ಪಾಸ್ತಿಗಳನ್ನು ಹೊಂದಿರುವ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ ಅಕ್ರಮ ಆಸ್ತಿ ಗಳಿಕೆ ಪ್ರಕರಣ ದಾಖಲಿಸಿ, ರಾಜ್ಯದ 14 ಸ್ಥಳಗಳಲ್ಲಿ ಎಸಿಬಿ ದಾಳಿ ನಡೆಸಿ, ಶುಕ್ರವಾರ ಕಾರ್ಯಾಚರಣೆ ನಡೆಸಿದ್ದರು.

ಜಂಟಿ ಆಯುಕ್ತ: ವಿಭಾಗೀಯ ಸರಕು ಮತ್ತು ಸೇವಾ ಕಚೇರಿ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ ಎಂ.ಬಿ.ನಾರಾಯಣಸ್ವಾಮಿ ಅವರ ಕುಟುಂಬಸ್ಥರ ಹೆಸರಿನಲ್ಲಿ ಕೋಲಾರ ನಗರ ವ್ಯಾಪ್ತಿಯಲ್ಲಿ 3 ಅಂತಸ್ಥಿನ ಮನೆ, ಬೆಂಗಳೂರಿನ ಮೇಡಹಳ್ಳಿಯಲ್ಲಿ 3 ನಿವೇಶನ, ಕೋಲಾರ ಮತ್ತು ಚಿಂತಾಮಣಿ ತಾಲೂಕಿನಲ್ಲಿ 45 ಎಕರೆ ಕೃಷಿ ಭೂಮಿ, 123 ಗ್ರಾಂ ಚಿನ್ನ, 1.310 ಕೆಜಿ ಬೆಳ್ಳಿ, 2 ಟ್ರ್ಯಾಕ್ಟರ್, 3 ಕಾರು, 10 ದ್ವಿಚಕ್ರ ವಾಹನ, 60 ಸಾವಿರ ಬ್ಯಾಂಕ್ ಠೇವಣಿ, ವಿಮೆ ಪಾಲಿಸಿಗಳು ಹಾಗೂ 13.53 ಲಕ್ಷ ಗೃಹೋಪಯೋಗಿ ವಸ್ತುಗಳ ದಾಖಲೆ ಪತ್ರ ಪತ್ತೆಯಾಗಿವೆ.

ರಾಮನಗರ ಜಿಲ್ಲೆಯ(ಬೆಂಗಳೂರು ಮಿಲ್ಕ್ ಯೂನಿಯನ್) ಬಮೂಲ್ ಉಪ ವ್ಯವಸ್ಥಾಪಕ ಡಾ.ಶಿವಶಂಕರ್ ಅವರ ಮತ್ತು ಕುಟುಂಬಸ್ಥರ ಹೆಸರಿನಲ್ಲಿ ರಾಮನಗರದಲ್ಲಿ ಮೂರು ಅಂತಸ್ಥಿನ ಮನೆ, 3 ನಿವೇಶನ, ಯಲಹಂಕದಲ್ಲಿ 1 ನಿವೇಶನ, ದೊಡ್ಡಬಳ್ಳಾಪುರದ ಲಕ್ಷ್ಮೀದೇವಿಪುರದಲ್ಲಿ 2 ಎಕರೆ 16 ಗುಂಟೆ ಕೃಷಿ ಭೂಮಿ, 530 ಗ್ರಾಂ ಚಿನ್ನ, ಕಾರು, ಬೈಕ್, 30.60 ಲಕ್ಷ ಬ್ಯಾಂಕ್‌ನಲ್ಲಿ ನಿಶ್ಚಿತ ಠೇವಣಿ ಮತ್ತು 5 ಲಕ್ಷ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.

ಮೈಸೂರಿನ ಪಿರಿಯಾಪಟ್ಟಣ ಉಪ ವಿಭಾಗ ಪಂಚಾಯತ್ ರಾಜ್ ಇಲಾಖೆ ಸಹಾಯಕ ಅಭಿಯಂತರ ಅರ್ಶದ್ ಪಾಷಾ ಅವರ ಮತ್ತು ಕುಟುಂಬಸ್ಥರ ಹೆಸರಿನಲ್ಲಿ 2 ಮನೆ, 5 ನಿವೇಶನ, 7 ಎಕರೆ ಕೃಷಿ ಭೂಮಿ, 428 ಗ್ರಾಂ ಚಿನ್ನ, 235 ಗ್ರಾಂ ಬೆಳ್ಳಿ, 2 ಕಾರು, 1 ಬೈಕ್, 12.49 ಲಕ್ಷ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿರುತ್ತದೆ.

ಹಾಸನ ವಿಶೇಷ ವಿಭಾಗದ ಪಿಬ್ಲ್ಯೂಡಿ ಇಲಾಖೆ ಸಹಾಯಕ ಅಭಿಯಂತರ ಎಚ್.ಎಸ್.ಚೆನ್ನೇಗೌಡ ಅವರ ಮತ್ತು ಕುಟುಂಬಸ್ಥರ ಹೆಸರಿನಲ್ಲಿ 1 ಮನೆ, 3 ನಿವೇಶನ, 3.6 ಎಕರೆ ಕೃಷಿ ಭೂಮಿ, 293 ಗ್ರಾಂ ಚಿನ್ನ , 2.484 ಕೆಜಿ ಬೆಳ್ಳಿ, ಕಾರು, ಬೈಕ್, ಎಲ್‌ಐಸಿ ವಿಮೆ, 15 ಲಕ್ಷ ಠೇವಣಿ, 1 ಲಾಕರ್ ಹಾಗೂ 10 ಲಕ್ಷ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿರುತ್ತದೆ.

ಈ ಬಗ್ಗೆ ತನಿಖೆ ಹಾಗೂ ಈಗಾಗಲೇ ದೊರೆತಿರುವ ದಾಖಲೆಗಳ ಪರಿಶೀಲನಾ ಕಾರ್ಯ, ಸಂಬಂಧಪಟ್ಟ ಮಾಹಿತಿ ಸಂಗ್ರಹಣೆ ಮುಂದುವರೆದಿದೆ ಎಂದು ಎಸಿಬಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News