ಕಪಾಳಕ್ಕೆ ಹೊಡೆದ ಪತ್ನಿ: ಕುಡುಕ ಪತಿ ಮೃತ್ಯು

Update: 2019-06-23 16:28 GMT

ಚಾಮರಾಜನಗರ, ಜೂ.23: ಜಗಳದ ಸಂದರ್ಭ ಕುಪಿತಗೊಂಡ ಪತ್ನಿ, ಕಪಾಳಕ್ಕೆ ಹೊಡೆದ ಪರಿಣಾಮ ಕುಡುಕ ಪತಿ ಮೃತಪಟ್ಟ ಘಟನೆ ತಾಲೂಕಿನ ಉತ್ತುವಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಪ್ರಭುಸ್ವಾಮಿ (42) ಮೃತರು. ಇವರ ಪತ್ನಿ ಅಂಬಿಕಾ ಆರೋಪಿಯಾಗಿದ್ದು, ಮೃತರ ಸಹೋದರಿ ನೀಡಿದ ದೂರಿನ್ವಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಏನಿದು ಘಟನೆ?: ಪ್ರಭುಸ್ವಾಮಿ, ಅಂಬಿಕಾ ಹಲವು ವರ್ಷಗಳ ಹಿಂದೆ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಪ್ರಭುಸ್ವಾಮಿ ಕುಡಿದ ಮತ್ತಿನಲ್ಲಿ ಆಗಾಗ ಪತ್ನಿಯೊಂದಿಗೆ ಜಗಳವಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಜಗಳದ ನಡುವೆ ಕೋಪಗೊಂಡ ಪತ್ನಿ ಅಂಬಿಕಾ ಪತಿಯ ಕಪಾಳಕ್ಕೆ ಹೊಡೆದಿದ್ದು, ಈ ವೇಳೆ ಪ್ರಭುಸ್ವಾಮಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಇದರಿಂದ ಗಾಬರಿಗೊಂಡ ಅಂಬಿಕಾ ತನ್ನಿಬ್ಬರು ಮಕ್ಕಳನ್ನು ಕರೆದುಕೊಂಡು ಅಳುತ್ತಾ ಊರಿನಿಂದ ಬಸ್‌ ನಿಲ್ದಾಣದತ್ತ ತೆರಳುತ್ತಿದ್ದಾಗ, ಗ್ರಾಮಸ್ಥರು ಅನುಮಾನಗೊಂಡು ಮನೆಯನ್ನು ಪರಿಶೀಲಿಸಿದಾಗ ನಿಜಾಂಶ ತಿಳಿದಿದೆ.

ಮೃತ ಪ್ರಭುಸ್ವಾಮಿಯ ಸಹೋದರಿ ಜಯಲಕ್ಷ್ಮಿ, ನನ್ನ ಅಣ್ಣನನ್ನು ಅತ್ತಿಗೆ ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಇದರ ಅನ್ವಯ ಗ್ರಾಮಾಂತರ ಠಾಣೆ ಸಬ್‌ಇನ್ಸ್‌ಪೆಕ್ಟರ್‌ ರವಿಕುಮಾರ್‌, ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News