ಜೂ.30ರವರೆಗೆ ಕಡತ ವಿಲೇವಾರಿ ಸಪ್ತಾಹ: ಆರ್.ವಿ.ದೇಶಪಾಂಡೆ

Update: 2019-06-24 16:43 GMT

ಧಾರವಾಡ, ಜೂ.24: ಕಂದಾಯ ಇಲಾಖೆಯಲ್ಲಿ ಇತ್ಯರ್ಥವಾಗದೇ ಬಾಕಿ ಉಳಿದಿರುವ ಕಡತಗಳನ್ನು ವಿಲೇವಾರಿ ಮಾಡುವ ಉದ್ದೇಶದಿಂದ ಜೂ.24 ರಿಂದ 30 ರವರೆಗೆ ಕಡತ ವಿಲೇವಾರಿ ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಪ್ತಾಹದ ಅವಧಿಯಲ್ಲಿ ಸಾಮಾನ್ಯ ಕಡತಗಳ ಜೊತೆಗೆ ವಿಶೇಷವಾಗಿ ದೀರ್ಘ ಕಾಲದಿಂದ ಬಾಕಿ ಉಳಿದ ಕಡತಗಳನ್ನು ವಿಲೇವಾರಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಕಡತಗಳ ಶೀಘ್ರ ವಿಲೇವಾರಿಯಲ್ಲಿ ಪಾರದರ್ಶಕತೆ ನಿಯಮ ಕಾಯ್ದುಕೊಳ್ಳುವ ಕುರಿತು ಇಲಾಖಾ ಮುಖ್ಯಸ್ಥರು, ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ತಮ್ಮ ಅಧೀನ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮಾರ್ಗದರ್ಶನ ಮಾಡಬೇಕು ಎಂದು ದೇಶಪಾಂಡೆ ಸೂಚಿಸಿದ್ದಾರೆ.

ಕಳೆದ 2018ರ ನವೆಂಬರ್ 12 ರಿಂದ 18 ರವರೆಗೆ ಕಡತ ವಿಲೇವಾರಿ ಸಪ್ತಾಹ ಹಮ್ಮಿಕೊಂಡ ಸಂದರ್ಭದಲ್ಲಿ ರಾಜ್ಯಾದ್ಯಂತ ಸುಮಾರು 2.5 ಲಕ್ಷಕ್ಕೂ ಅಧಿಕ ಕಡತಗಳು ವಿಲೇವಾರಿಯಾದವು, ಇದರಿಂದ ಪ್ರೇರಣೆ ದೊರೆತಿದ್ದು, ಇದೀಗ ಜೂ.24 ರಿಂದ 30ರವರೆಗೆ ಮತ್ತೊಮ್ಮೆ ಸಪ್ತಾಹ ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸಪ್ತಾಹದ ಕೊನೆಯ ದಿನವಾಗಿರುವ ಜೂ.30ರ ನಂತರ ಎಲ್ಲ ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ಸಪ್ತಾಹದ ಆರಂಭದಲ್ಲಿ ಬಾಕಿ ಇದ್ದ ಕಡತಗಳು, ಸಪ್ತಾಹದ ಅವಧಿಯಲ್ಲಿ ವಿಲೇವಾರಿ ಮಾಡಿದ ನಂತರ ಬಾಕಿ ಉಳಿದ ಕಡತಗಳ ವಿವರಗಳನ್ನು ಕ್ರೋಡೀಕರಿಸಿ ಜುಲೈ 2ರವರೆಗೆ ಸರಕಾರಕ್ಕೆ ವರದಿ ಸಲ್ಲಿಸುವಂತೆ ದೇಶಪಾಂಡೆ, ಇಲಾಖೆಯ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News