ಅಧಿಕಾರಿಗಳು ಸುಳ್ಳು ಹೇಳಿದ್ದರೆ ಕಾನೂನು ಕ್ರಮ: ಸಚಿವ ಜಾರ್ಜ್ ಎಚ್ಚರಿಕೆ

Update: 2019-06-24 18:20 GMT

ಚಿಕ್ಕಮಗಳೂರು, ಜೂ.24: ಕರಗಡ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಜನಪ್ರತಿನಿಧಿಗಳು ಕಾಮಗಾರಿ ಪೂರ್ಣ ಎಂದು ವೀಡಿಯೊ ದಾಖಲೆ ಸಹಿತ ಹೇಳುತ್ತಿದ್ದಾರೆ. ಈ ಸಂಬಂಧ ತಜ್ಞರಿಂದ ಸ್ಥಳ ಪರಿಶೀಲನೆ ನಡೆಸಲು ಸಂಬಂಧಿಸಿದ ಇಲಾಖೆಯ ಮುಖ್ಯಸ್ಥರನ್ನು ಕೋರಲಾಗುವುದು. ಅಧಿಕಾರಿಗಳು ಸುಳ್ಳು ಹೇಳಿದ್ದರೆ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಎಚ್ಚರಿಸಿದ್ದಾರೆ.

ಜಿಪಂ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಒಬ್ಬರು, ಕರಗಡ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಮೊದಲ ಹಂತವು ಸಿ.ಬಿ.ಎಲ್.ವರೆಗೆ ಪೂರ್ಣಗೊಂಡಿದೆ. ಮಳೆ ಬಂದು ದೇವಿಕೆರೆ ತುಂಬಿದಲ್ಲಿ ನೀರು ನಾಲೆಯಲ್ಲಿ ಹರಿಯುತ್ತದೆ ಎಂದು ಸಭೆಗೆ ವರದಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿ.ಟಿ.ರವಿ, ನಿನ್ನೆ ನಮ್ಮ ಮನೆಗೆ ಬಂದಿದ್ದ ಸಹಾಯಕ ಇಂಜಿನಿಯರ್ ಕಾಮಗಾರಿ ಪೂರ್ಣಗೊಂಡಿದೆ ಎಂದು ತಿಳಿಸಿದರು. ತಕ್ಷಣ ತಾಪಂ ಸದಸ್ಯರಿಗೆ ಕಾಮಗಾರಿ ಪೂರ್ಣಗೊಂಡಿದೆಯೋ, ಇಲ್ಲವೋ ಎಂದು ಪರಿಶೀಲಿಸಿ ವೀಡಿಯೊ ಮಾಡಿ ಕಳುಹಿಸುವಂತೆ ಹೇಳಿದ್ದೆ, ಅವರು ವೀಡಿಯೊ ಮಾಡಿ ಕಳಿಸಿದ್ದಾರೆ. ಕೆಲವೆಡೆ ಸಿಬಿಎಲ್‌ವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ, ಅವಕಾಶ ನೀಡಿದರೆ ವೀಡಿಯೊ ಪ್ರದರ್ಶಿಸುತ್ತೇನೆ ಎಂದರು.

ಅಧಿಕಾರಿಗಳು ಸಭೆಗೆ ತಪ್ಪು ಮಾಹಿತಿ ನೀಡಬಾರದು. ಹಿಂದೊಮ್ಮೆ ಅಧಿಕಾರಿಗಳು ವಿಧಾನಸೌಧಕ್ಕೆ ತಪ್ಪು ಮಾಹಿತಿ ನೀಡಿದ್ದರು. ಈಗ ಸಭೆಗೆ ತಪ್ಪುಮಾಹಿತಿ ನೀಡುತ್ತಿದ್ದಾರೆ. ಈಗಲೇ ಸ್ಥಳಕ್ಕೆ ತೆರಳಿ ಪರಿಶೀಲಿಸಬೇಕು. ಕಾಮಗಾರಿ ಪೂರ್ಣಗೊಳ್ಳದಿದ್ದರೆ ಅಧಿಕಾರಿಯನ್ನು ಅಮಾನತು ಮಾಡಬೇಕೆಂದು ಶಾಸಕ ರವಿ ಆಗ್ರಹಿಸಿದರು.

ಆಗ ಮಧ್ಯೆ ಪ್ರವೇಶಿಸಿ ಮಾತನಾಡಿದ ಸಚಿವ ಜಾರ್ಜ್, ಕರಗಡ ಕುಡಿಯುವ ನೀರು ಯೋಜನೆ ಕಾಮಗಾರಿ ಪೂರ್ಣಗೊಂಡಿದೆಯೋ, ಇಲ್ಲವೋ ಎಂಬುದನ್ನು ತಂತ್ರಜ್ಞರೇ ತೀರ್ಮಾನಿಸಬೇಕಿದೆ. ಸಣ್ಣ ನೀರಾವರಿ ಸಚಿವರೊಂದಿಗೆ ಚರ್ಚಿಸಿ ಸಮರ್ಥ ತಂತ್ರಜ್ಞರೊಂದಿಗೆ ಆಗಮಿಸಿ ಸ್ಥಳ ಪರಿಶೀಲಿಸುವಂತೆ ಕೋರುತ್ತೇನೆ. ಮೊದಲು ಕೆರೆಗೆ ನೀರು ಹರಿಯುವುದು ಮುಖ್ಯ, ಆ ಬಗ್ಗೆ ಚಿಂತನೆ ನಡೆಸೋಣ ಎಂದು ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.

ನಂತರ ವಿಧಾನಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ, ಕಾಮಗಾರಿಗೆ ಅನುದಾನದ ಕೊರತೆಯಿಲ್ಲ. ಆದರೆ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಕಾಮಗಾರಿ ವಿಳಂಬವಾಗುತ್ತಿದೆ ಎಂದು ದೂರಿದರು.

ಸಚಿವ ಕೆ.ಜೆ.ಜಾರ್ಜ್ ಕೆ.ಐ.ಓ.ಸಿ.ಎಲ್.ನ ಟೌನ್‌ಶಿಪ್ ಏನಾಯಿತು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಮಾತನಾಡಿ, ಕಳಸವನ್ನು ತಾಲೂಕಾಗಿ ಘೋಷಿಸಲಾಗಿದೆ. ಟೌನ್‌ಶಿಪ್ ಕಳಸದಿಂದ ಕೇವಲ 10 ಕಿ.ಮೀ. ದೂರದಲ್ಲಿದೆ. ತಾಲೂಕು ಕಚೇರಿ ಹಾಗೂ ಇತರ ಕಚೇರಿಗಳಿಗೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಶೀಘ್ರದಲ್ಲಿಯೇ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಸಭೆಗೆ ತಿಳಿಸಿದಾಗ, ಕೂಡಲೇ ಪ್ರಸ್ತಾವ ಸಲ್ಲಿಸಿ ಎಂದು ಸಚಿವರು ಸೂಚಿಸಿದರು.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಉಪವಿಭಾ ಗಾಧಿಕಾರಿ ಶಿವಕುಮಾರ್ ಮಾತನಾಡಿ, ಟೌನ್‌ಶಿಪ್ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣವಿತ್ತು. ಈಗ ನ್ಯಾಯಾಲಯವು ಕಂದಾಯ ಇಲಾಖೆ ಪರವಾಗಿ ಆದೇಶ ನೀಡಿದೆ. ಶೀಘ್ರದಲ್ಲಿಯೇ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಹೇಳಿದರು. ಅರಣ್ಯ ಇಲಾಖೆ ಅಧಿಕಾರಿ ಮಾತನಾಡಿ, ಟೌನ್‌ಶಿಪ್ ಸೇರಿ ಅರಣ್ಯ ಪ್ರದೇಶವೆಂದು ನೋಟಿಫಿಕೇಶನ್ ಆಗಿದೆ ಎಂದು ಸಬೆಗೆ ತಿಳಿಸಿದರು. ಕೊಡಗಿನ ಕಾಫಿಬೆಳೆಗಾರರಿಗೆ ರಾಜ್ಯ ಸರಕಾರ ವಿಶೇಷ ಪ್ಯಾಕೇಜ್ ನೀಡಿದೆ. ಅದೇ ರೀತಿ ಜಿಲ್ಲೆಯಲ್ಲಿಯೂ ಕಳೆದ ಬಾರಿ ಅತಿವೃಷ್ಟಿಯಿಂದ ಕಾಫಿ, ಅಡಕೆ, ಮೆಣಸು ಬೆಳೆಗಳಿಗೆ ಅಪಾರ ಹಾನಿಯಾಗಿದೆ. ಜಿಲ್ಲೆಗೂ ವಿಶೇಷ ಪ್ಯಾಕೇಜನ್ನು ರಾಜ್ಯ ಸರಕಾರ ಘೋಷಣೆ ಮಾಡಬೇಕು ಎನ್ನುವ ಒತ್ತಾಯ ಸಭೆಯಲ್ಲಿ ಕೇಳಿಬಂತು.

ಈ ವೇಳೆ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಕೊಡಗಿಗೆ ವಿಶೇಷ ಪ್ಯಾಕೇಜ್ ನೀಡಿರುವ ಕುರಿತು ಪರಿಶೀಲಿಸಿ ಮಾಹಿತಿ ಪಡೆದುಕೊಳ್ಳಬೇಕು. ಅಲ್ಲಿಗೆ ವಿಶೇಷ ಪ್ಯಾಕೇಜ್ ಕೊಟ್ಟಿದ್ದರೇ ಅದರಂತೆ ಚಿಕ್ಕಮಗಳೂರು ಜಿಲ್ಲೆಗೂ ವಿಶೇಷ ಪ್ಯಾಕೇಜ್ ನೀಡುವ ಕುರಿತು ಮುಖ್ಯಮಂತ್ರಿ ಬಳಿಗೆ ನಿಯೋಗ ತೆರಳಿ ಮನವಿ ಮಾಡಿಕೊಳ್ಳೋಣ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News