ಬಂದೂಕಿನ ಗುಂಡುಗಳಿದ್ದ ವ್ಯಕ್ತಿಯ ಶವ ಪತ್ತೆ: ಕೊಲೆ ಶಂಕೆ

Update: 2019-06-26 17:01 GMT

ಚಿಕ್ಕಮಗಳೂರು, ಜೂ.26: ಬಂದೂಕಿನ ಗುಂಡುಗಳಿಂದ ಗಾಯಗೊಂಡು ಮೃತಪಟ್ಟ ಸ್ಥಿತಿಯಲ್ಲಿ ವ್ಯಕ್ತಿಯೋರ್ವನ ಮೃತದೇಹ ತಾಲೂಕಿನ ಹಳ್ಳುವಳ್ಳಿ ಗ್ರಾಮದಲ್ಲಿ ಬುಧವಾರ ಪತ್ತೆಯಾಗಿದ್ದು, ವ್ಯಕ್ತಿಯನ್ನು ಬಂದೂಕಿನ ಗುಂಡಿನಿಂದ ಹೊಡೆದು ಸಾಯಿಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಬುಧವಾರ ಬೆಳಗ್ಗೆ ತಾಲೂಕಿನ ಹಳ್ಳುವಳ್ಳಿ ಗ್ರಾಮದ ಪುಟ್ಟಸ್ವಾಮಿ ಗೌಡ ಎಂಬವರ ಮನೆಯ ಸಮೀಪದಲ್ಲಿ ಅಪರಿಚತ ವ್ಯಕ್ತಿಯ ಶವ ಪತ್ತೆಯಾಗಿದೆ ಎಂದು ತಿಳಿದು ಬಂದಿದ್ದು, ಶವವನ್ನು ಕಂಡ ಕೂಡಲೇ ಪುಟ್ಟಸ್ವಾಮಿಗೌಡ ಚಿಕ್ಕಮಗಳೂರು ಗ್ರಾಮಾಂತರ ಠಾಣಾ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಭೇಟಿ ಇತ್ತ ಪೊಲೀಸರು ವ್ಯಕ್ತಿಯ ಮೃತದೇಹ ಪರಿಶೀಲಿಸಿದಾಗ ದೇಹದಲ್ಲಿ ಬಂದೂಕಿನ ಗುಂಡುಗಳು ಇರುವುದನ್ನು ಪತ್ತೆ ಹಚ್ಚಿದ್ದಾರೆಂದು ತಿಳಿದು ಬಂದಿದೆ.

ಘಟನೆ ಸಂಬಂಧ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದಾಗ ಮೃತ ವ್ಯಕ್ತಿಯು ಚಿಕ್ಕಮಗಳೂರು ನಗರದ ಬಸವನಹಳ್ಳಿ ನಿವಾಸಿ ಹರೀಶ್(32) ಎಂದು ಗುರುತು ಪತ್ತೆ ಹಚ್ಚಿದ್ದು, ಮೃತ ವ್ಯಕ್ತಿಯು ಗಾರೆ ಕೆಲಸ ಮಾಡಿಕೊಂಡಿದ್ದ, ಈತನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿಸಿದ್ದಾರೆ.

ಹರೀಶ್‍ನನ್ನು ಹತ್ಯೆ ಮಾಡಿದವರು ಯಾರು?, ಯಾವ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News