ಬಿಜೆಪಿ ಸಂಸದರು ಯಾರೂ ಕೂಡ ವೈಯಕ್ತಿಕ ವರ್ಚಸ್ಸಿನಿಂದ ಗೆದ್ದಿಲ್ಲ: ಚಕ್ರವರ್ತಿ ಸೂಲಿಬೆಲೆ

Update: 2019-06-27 17:39 GMT

ಚಿತ್ರದುರ್ಗ, ಜೂ.27: ಬಿಜೆಪಿ ಸಂಸದರು ಯಾರೂ ಕೂಡ ಗೆದ್ದದ್ದು ತಮ್ಮ ವೈಯಕ್ತಿಕ ವರ್ಚಸ್ಸಿನಿಂದ ಅಲ್ಲ. ಪ್ರಧಾನಿ ಮೋದಿಯವರಿಂದಾಗಿ ಅವರೆಲ್ಲರೂ ಗೆದ್ದಿದ್ದಾರೆ ಎಂದು ಟೀಂ ಮೋದಿ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.

ಘಟಬಂಧನ್ ಜೊತೆ ಕುಮಾರಸ್ವಾಮಿ ರಾಜ್ಯಕ್ಕೆ ಬಂದಾಗ ಬಿಜೆಪಿ ಸಂಸದರೆಲ್ಲರೂ ಗೆಲ್ಲುವ ಆಸೆಯನ್ನೇ ಕೈಬಿಟ್ಟಿದ್ದರು. ಕೇವಲ ಆರು ಅಥವಾ ಏಳು ಸೀಟು ಗೆಲ್ಲಬಹುದೆಂಬ ಲೆಕ್ಕಾಚಾರ ಶುರುವಾಗಿತ್ತು ಎಂದವರು ಹೇಳಿದ್ದಾರೆ ಎಂದು ವರದಿಯಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಆಸ್ಪತ್ರೆ ವಿಚಾರವಾಗಿ ಮಾಜಿ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಜನರೊಂದಿಗೆ ವರ್ತಿಸಿರುವ ರೀತಿ ಸರಿಯಲ್ಲ. ಗೆಲ್ಲುವ ಮುನ್ನ ಜನರೊಂದಿಗೆ ಇದ್ದ ಔದಾರ್ಯವನ್ನು ಗೆದ್ದ ನಂತರವೂ ಉಳಿಸಿಕೊಳ್ಳಬೇಕೆಂದು ಅವರು ಹೇಳಿದ್ದಾರೆ.

ಮೋದಿ ಮುಖ ನೋಡಿ ಜನರು ರಾಜ್ಯದಲ್ಲಿ 25 ಸ್ಥಾನಗಳನ್ನು ಬಿಜೆಪಿಗೆ ನೀಡಿದ್ದಾರೆ. ಹೀಗಾಗಿ ಬಿಜೆಪಿ ಸಂಸದರು ಜನರಿಗೆ ಪೂರಕವಾಗಿ ಕೆಲಸ ಮಾಡಬೇಕು. ಯಾರೂ ಸ್ಪಷ್ಟವಾಗಿ ಸ್ವಂತ ವರ್ಚಸ್ಸಿನಿಂದ ಗೆದ್ದಿದ್ದೇನೆಂದು ಹೇಳಲು ಅರ್ಹರಿಲ್ಲ. ಜಾತಿ ಬೆಂಬಲದಿಂದ ಗೆದ್ದಿದ್ದೇನೆಂದರೆ ಮತದಾರರು ಒಪ್ಪುವುದಿಲ್ಲ ಎಂದು ಕೇಂದ್ರ ಸಚಿವ ಸದಾನಂದ ಗೌಡರಿಗೆ ಸೂಲಿಬೆಲೆ ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News