'ಬರ'ದ ಕಠಿಣ ಪರಿಸ್ಥಿತಿಯಲ್ಲಿ ಸಿಎಂಗೆ ವಿದೇಶ ಪ್ರವಾಸ ಅಗತ್ಯವಿತ್ತಾ: ಯಡಿಯೂರಪ್ಪ ಪ್ರಶ್ನೆ

Update: 2019-06-29 13:39 GMT

ಬೆಂಗಳೂರು, ಜೂ. 29: ಸಮ್ಮಿಶ್ರ ಸರಕಾರದಲ್ಲಿ ಎರಡು ಪಕ್ಷದವರು ಕಿತ್ತಾಡಿಕೊಂಡು ಸರಕಾರ ಅಸ್ಥಿರಗೊಳಿಸಿದರೆ ದೊಡ್ಡಪಕ್ಷವಾಗಿರುವ ನಾವು ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ ಎನ್ನುವ ಮೂಲಕ ಸರಕಾರ ರಚನೆ ಮಾಡುವ ಸುಳಿವನ್ನು ವಿಧಾನಸಭೆ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ನೀಡಿದ್ದಾರೆ.

ಶನಿವಾರ ನಗರದ ಬಂಟರ ಸಂಘದಲ್ಲಿ ಬೆಂಗಳೂರು ನಗರ ಬಿಜೆಪಿ ಘಟಕ ಹಮ್ಮಿಕೊಂಡಿದ್ದ ನೂತನ ಸಂಸದರಿಗೆ ಅಭಿನಂದನೆ ಹಾಗೂ ಮತದಾರರ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಾವು ಸರಕಾರ ನಡೆಸುವಷ್ಟು ಅಗತ್ಯ ಸ್ಥಾನಗಳು ಸಿಗದಿದ್ದರೂ, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಅಪವಿತ್ರ ಮೈತ್ರಿ ಸರಕಾರದ ವಿರುದ್ಧ ಫಲಿತಾಂಶ ಬಂದಿದೆ ಎಂದರು.

ಇಂದಿನ ಸಂದರ್ಭ ನೋಡಿದರೆ ಎರಡೂ ಪಕ್ಷದ ನಾಯಕರು ಪರ-ವಿರೋಧ ಹೇಳಿಕೆಗಳು ನೀಡುತ್ತಾ ಬೀದಿಯಲ್ಲಿಯೇ ಕಿತ್ತಾಡುತ್ತಿದ್ದಾರೆ. ಅಲ್ಲದೆ, ಅನೇಕ ಶಾಸಕರು ಸರಕಾರದ ವಿರುದ್ಧವೇ ಬಂಡೆದ್ದು ಹೊರಬರಲು ಮುಂದಾಗಿದ್ದಾರೆ. ಒಂದು ವೇಳೆ ಶಾಸಕರು ಹೊರಬಂದು, ಸರಕಾರ ಅಸ್ಥಿರಗೊಂಡರೆ ಅದಕ್ಕೆ ಬಿಜೆಪಿ ಹೊಣೆಯಾಗುವುದಿಲ್ಲ ಎಂದು ಅವರು ನುಡಿದರು.

ನಾವು ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರಕಾರದಲ್ಲಿ ಅಸಮಾಧಾನಗೊಂಡಿರುವ ಶಾಸಕರನ್ನು ಬಿಜೆಪಿ ಬರಲು ಆಹ್ವಾನ ನೀಡುವುದಿಲ್ಲ. ಆದರೆ, ಅವರವರಿಂದಲೇ ಸರಕಾರ ಬಿದ್ದುಹೋದರೆ ಮಾತ್ರ ನಾವು ಸುಮ್ಮನೆ ನೋಡುತ್ತಾ ಕುಳಿತುಕೊಳ್ಳುವುದಿಲ್ಲ ಎಂದರು.

ವಿದೇಶ ಪ್ರವಾಸದ ಅಗತ್ಯವೇನು?: ರಾಜ್ಯದ ವಿಧಾನಸೌಧದಲ್ಲಿ ಒಬ್ಬ ಸಚಿವರು ಕೈಗೆ ಸಿಗುವುದಿಲ್ಲ, ಅಲ್ಲಿ ಕೂತು ಕೆಲಸ ಮಾಡಲೂ ಸಚಿವರಿಲ್ಲ. ರಾಜ್ಯದಲ್ಲಿ ಭೀಕರವಾದ ಬರಗಾಲವಿದೆ. ಇಂತಹ ಸಂದರ್ಭದಲ್ಲಿ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ವ್ಯವದಾನವನ್ನು ಸಚಿವ ಸಂಪುಟದ ಯಾರೊಬ್ಬರೂ ಮಾಡುತ್ತಿಲ್ಲ. ಅಲ್ಲದೆ, ಇದೀಗ ಮುಖ್ಯಮಂತ್ರಿ ವಿದೇಶ ಪ್ರವಾಸಕ್ಕೆ ಹೊರಟಿದ್ದಾರೆ. ಕಠಿಣ ಪರಿಸ್ಥಿತಿಯಲ್ಲಿ ಸಿಎಂಗೆ ವಿದೇಶ ಪ್ರವಾಸ ಅಗತ್ಯವಿತ್ತಾ ಎಂದು ಯಡಿಯೂರಪ್ಪ ಪ್ರಶ್ನಿಸಿದರು.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ಶೀಘ್ರದಲ್ಲಿಯೇ ರಾಜ್ಯ ಸರಕಾರ ಪತನಗೊಳ್ಳಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರಕಾರ ರಚನೆಯಾಗಲಿದೆ. ಯಡಿಯೂರಪ್ಪ ಸಿಎಂ ಆಗಬೇಕು ಎಂಬುದು ಹಲವರ ಆಸೆಯಾಗಿದೆ. ಅದು ಶೀಘ್ರವೇ ನೆರವೇರಲಿದೆ ಎಂದು ಭವಿಷ್ಯ ನುಡಿದರು.

ವಿಧಾನಸಭಾ ಚುನಾವಣೆಯಲ್ಲಿ ನಾವು ಅತೀ ಹೆಚ್ಚು ಸ್ಥಾನ ಗೆದ್ದಿದ್ದರೂ, ಕೆಲವು ಸ್ಥಾನಗಳ ಕೊರತೆಯಿಂದ ಸರಕಾರ ರಚಿಸಲು ಸಾಧ್ಯವಾಗಿರಲಿಲ್ಲ. ಆದರೆ, ಇದೀಗ ಸಮ್ಮಿಶ್ರ ಸರಕಾರದ ಅವಧಿ ಮುಗಿಯುತ್ತಿದ್ದು, ಶೀಘ್ರದಲ್ಲಿಯೇ ಬಿಜೆಪಿ ಪಕ್ಷದ ಕಾರ್ಯಕರ್ತರ ಕನಸು ನನಸಾಗುವ ದಿನ ಬರಲಿದೆ ಎಂದು ತಿಳಿಸಿದರು.

ಲೋಕಸಭಾ ಚುನಾವಣೆಯಲ್ಲಿ ಗೆದ್ದ ಬಳಿಕ ದಿಲ್ಲಿಯಲ್ಲಿ ಮಾಜಿ ಸಚಿವ ಅನಂತ್‌ಕುಮಾರ್ ಸ್ಥಾನವನ್ನು ತುಂಬಬೇಕೆಂದು ಯಡಿಯೂರಪ್ಪ ಹೇಳಿದ್ದರು. ಈವರೆಗೆ ಸಂಸತ್ತಿನಲ್ಲಿ ಕನ್ನಡ ನಾಡಿನ ಧ್ವನಿಯಾಗಿದ್ದ ಅವರು, ಇಂದು ನಮ್ಮೊಂದಿಗೆ ಇಲ್ಲ. ಆದರೆ, ರಾಜ್ಯದ ಯಾವುದೇ ವಿಚಾರ ಬಂದಾಗಲೂ ಪಕ್ಷಾತೀತವಾಗಿ ಹೋರಾಟ ನಡೆಸುತ್ತೇವೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್, ಶಾಸಕ ವಿ.ಸೋಮಣ್ಣ, ವಿಧಾನಪರಿಷತ್ ಸದಸ್ಯ ಆರ್.ದೇವೇಗೌಡ, ಬಿಬಿಎಂಪಿ ಸದಸ್ಯರಾದ ಉಮೇಶ್ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News