11 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು, ಜೂ.29: ವೈಟ್ಫೀಲ್ಡ್ ನ ಡಿಸಿಪಿ ಅಬ್ದುಲ್ ಅಹದ್ ಸೇರಿದಂತೆ 11 ಮಂದಿ ಐಪಿಎಸ್ ಅಧಿಕಾರಿಗಳನ್ನು ತಕ್ಷಣವೇ ಜಾರಿಗೆ ಬರುವಂತೆ ಸೂಚಿತ ಸ್ಥಳಕ್ಕೆ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ವೈಟ್ಫೀಲ್ಡ್ ನ ಡಿಸಿಪಿ ಅಬ್ದುಲ್ ಅಹದ್ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಎಸ್ಪಿಯನ್ನಾಗಿ ನೇಮಕ ಮಾಡಲಾಗಿದೆ. ಸೀಮಂತ್ ಕುಮಾರ್ ಸಿಂಗ್ ಅವರನ್ನು ಆಡಳಿತ ವಿಭಾಗ ಪ್ರಧಾನ ಕಚೇರಿಯ ಐಜಿಪಿಯನ್ನಾಗಿ ನೇಮಕ ಮಾಡಲಾಗಿದೆ.
ಲೋಕಾಯುಕ್ತದಲ್ಲಿದ್ದ ಎಸ್.ಮುರುಗನ್ ಅವರನ್ನು ಬೆಂಗಳೂರು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರನ್ನಾಗಿ ನೀಯೋಜಿಸಲಾಗಿದೆ. ಆಂತರಿಕ ಭದ್ರತೆ ವಿಭಾಗದಲ್ಲಿದ್ದ ಸಿದ್ದರಾಮಪ್ಪ ಅವರನ್ನು ಅಗ್ನಿಶಾಮಕ ವಿಭಾಗದ ಡಿಐಜಿಯಾಗಿ ವರ್ಗಾವಣೆ ಮಾಡಲಾಗಿದೆ.
ರೈಲ್ವೆ ಪೊಲೀಸ್ನಲ್ಲಿದ್ದ ಎಂ.ಎನ್.ಅನುಚೇತ್ ಅವರನ್ನು ವೈಟ್ಫೀಲ್ಡ್ ವಿಭಾಗದ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಬಾಗಲಕೋಟೆ ಎಸ್ಪಿಯಾಗಿದ್ದ ಅಭಿನವ್ ಖರೆ ಅವರನ್ನು ಕಮಾಂಡೆಂಟ್ ಕೆಎಸ್ಆರ್ಪಿ ನಾಲ್ಕನೇ ಬೆಟಾಲಿಯನ್ಗೆ ವರ್ಗಾವಣೆ ಮಾಡಲಾಗಿದೆ. ಆಂತರಿಕ ಭದ್ರತೆ ವಿಭಾಗದಲ್ಲಿದ್ದ ಡಿ.ಕಿಶೋರ್ ಬಾಬು ಅವರನ್ನು ಕಲಬುರಗಿ ಎಸ್ಪಿಯಾಗಿ ಹಾಗೂ ಲೋಕೇಶ್ ಅವರನ್ನು ಬಾಗಲಕೋಟೆ ಎಸ್ಪಿಯಾಗಿ ನೇಮಕ ಮಾಡಿ ಆದೇಶಿಸಲಾಗಿದೆ. ಹಾವೇರಿ ಎಸ್ಪಿಯಾಗಿದ್ದ ಸಂಜೀವ್ ಎಂ.ಪಾಟೀಲ್ ಅವರನ್ನು ಬೆಂಗಳೂರು ರೈಲ್ವೆ ವಿಭಾಗ ಎಸ್ಪಿಯಾಗಿ, ಬೆಂಗಳೂರು ನಗರ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ಪಿಯಾಗಿದ್ದ ಕೆ.ಜಿ.ದೇವರಾಜ ಅವರನ್ನು ಹಾವೇರಿ ಎಸ್ಪಿಯಾಗಿ ನೇಮಕ ಮಾಡಲಾಗಿದೆ.
ಹಾವೇರಿ ಎಸ್ಪಿಯಾಗಿದ್ದ ಪರುಷುರಾಮ್ ರನ್ನು ನಾಗರಿಕ ಜಾರಿ ನಿರ್ದೇಶನಾಲಯ ಬೆಂಗಳೂರು ಎಸ್ಪಿಯನ್ನಾಗಿ ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.