ಮಲ್ಲಿಕಾರ್ಜುನ್ ಖರ್ಗೆ ಸೋಲು ಶೋಷಿತರ ಸೋಲು: ಸಚಿವ ಖಾದರ್
ಕಲಬುರಗಿ, ಜು.2: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ್ ಖರ್ಗೆ ಅವರ ಸೋಲು ಅದು ಕೇವಲ ವೈಯಕ್ತಿಕ ಸೋಲಲ್ಲ, ಶೋಷಿತರ ಹಾಗೂ ಹಿಂದುಳಿದವರ ಸೋಲಾಗಿದೆ ಎಂದು ನಗರಾಭಿವೃದ್ದಿ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಏರ್ಪಡಿಸಿದ್ದ ಚಿಂತನ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಲೋಕಸಭೆಯಲ್ಲಿ ನಾವು ಸೋತಿದ್ದೇವೆ. ಆದರೆ, ಈ ಸೋಲು ಕೊನೆಯಲ್ಲ. ನಾವು ಬಲಿಷ್ಠರಾಗಬೇಕಾದರೆ ಹೋರಾಟ ಮಾಡುವ ಮೂಲಕ ಪಕ್ಷ ಸಂಘಟನೆ ಮಾಡಬೇಕಾಗಿದೆ. ಆ ಕೆಲಸ ಇಂದಿನಿಂದಲೇ ಪ್ರಾರಂಭವಾಗಬೇಕಿದ್ದು, ನಿಮ್ಮೆಲ್ಲರ ಪ್ರಾಮಾಣಿಕ ಪ್ರಯತ್ನ ಹಾಗೂ ತ್ಯಾಗದಿಂದ ಅದು ಸಾಧ್ಯವಾಗಲಿದೆ. ಮುಂದಿನ ದಿನಗಳಲ್ಲಿ ನಾವು ಮತ್ತಷ್ಟು ಪ್ರಬಲವಾಗಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ಬೂತ್ ಮಟ್ಟದಿಂದಲೇ ಪಕ್ಷ ಕಟ್ಟಬೇಕು. ನಿಮ್ಮ ಈ ಪ್ರಯತ್ನ ಇಡೀ ದೇಶಕ್ಕೆ ಮಾದರಿಯಾಗಬೇಕು ಎಂದು ಕರೆ ನೀಡಿದ ಸಚಿವರು, ಕಾಂಗ್ರೆಸ್ ಈ ಹಿಂದೆ ಕೇಂದ್ರದಲ್ಲಿ ಸೋತಿದ್ದರೂ ಮತ್ತೆ ಪ್ರಬಲವಾಗಿ ಬೆಳೆದಿತ್ತು. ಅದಕ್ಕೆ ಕಾರಣ ನಿಷ್ಠಾವಂತ ಕಾರ್ಯಕರ್ತರ ಹೋರಾಟದ ಫಲ ಎಂದು ಹೇಳಿದರು.
ಬಿಜೆಪಿಯವರು ಏನೇ ಗೊಂದಲ ಸೃಷ್ಟಿಸಿದರೂ ರಾಜ್ಯದ ಸಮ್ಮಿಶ್ರ ಸರಕಾರ ಗಟ್ಟಿಯಾಗಿದ್ದು ಜನಪರ ಕೆಲಸ ಮಾಡಿಕೊಂಡು ಹೋಗುತ್ತದೆ. ಕೇಂದ್ರ ಸರಕಾರದ ವಿರುದ್ದ ಹೋರಾಟ ಮಾಡಲು ನೀವು ಸತತ ಪ್ರಯತ್ನ ಮಾಡಬೇಕು. ಹಾಗಾಗಿ ನಿಮ್ಮ ಮಧ್ಯೆ ಏನಾದರೂ ಮುನಿಸು, ಭಿನ್ನಾಭಿಪ್ರಾಯ ಇದ್ದರೆ ಅದನ್ನು ಬದಿಗಿಟ್ಟು ಪಕ್ಷ ಸಂಘಟನೆಗೆ ನಿಮ್ಮನ್ನು ನೀವು ತೊಡಗಿಸಿಕೊಂಡು ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಸೀಟುಗಳನ್ನು ಗೆಲ್ಲಲು ಸಹಕರಿಸಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ಸಮಾಜಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ಜಿಲ್ಲಾಧ್ಯಕ್ಷರಾದ ಜಗದೇವ ಗುತ್ತೇದಾರ, ವಿಧಾನಪರಿಷತ್ ಸದಸ್ಯ ತಿಪ್ಪಣ್ಣಪ್ಪಕಮಕನೂರು, ಶಿವಾನಂದ್ ಪಾಟೀಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.