ನಿವೃತ್ತ ಅಧಿಕಾರಿ ಮನೆಯಲ್ಲಿ ಯುವತಿಗೆ ಹಲ್ಲೆ ನಡೆಸಿ ದರೋಡೆ

Update: 2019-07-03 14:39 GMT

ಶಿವಮೊಗ್ಗ, ಜು. 3: ಮನೆಯೊಂದಕ್ಕೆ ಪ್ರವೇಶಿಸಿದ ದರೋಡೆಕೋರರು ಯುವತಿಗೆ ಹಲ್ಲೆ ನಡೆಸಿ, ನಗನಾಣ್ಯ ದೋಚಿ ಪರಾರಿಯಾಗಿರುವ ಘಟನೆ ಶಿವಮೊಗ್ಗ ನಗರದ ಬೊಮ್ಮನಕಟ್ಟೆ ಬಡಾವಣೆಯ ಅರವಿಂದ ನಗರದಲ್ಲಿ ಮಂಗಳವಾರ ನಡೆದಿದೆ. 

ನಿವೃತ್ತ ಕೆಪಿಟಿಸಿಎಲ್ ಅಧಿಕಾರಿ ಶಂಕರರಾವ್ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ. ಇವರ ಪುತ್ರಿ ಸುಬೋಧ (23) ಹಲ್ಲೆಗೊಳಗಾಗಿದವರಾಗಿದ್ದು, ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. 

ಸುಬೋಧರವರು ಮನೆಯಲ್ಲಿ ಓರ್ವರೇ ಇದ್ದಾಗ, ಪರಿಚಿತರ ಸೋಗಿನಲ್ಲ ದರೋಡೆಕೋರರು ಆಗಮಿಸಿ ಹಲ್ಲೆ ನಡೆಸಿದ್ದಾರೆ. ಇದರಿಂದ ಸುಬೋಧ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ನಂತರ ಮನೆಯಲ್ಲಿದ್ದ ಚಿನ್ನದ ಸರ, ಓಲೆ, 10 ಸಾವಿರ ನಗದನ್ನು ದೋಚಿ ದರೋಡೆಕೋರರು ಪರಾರಿಯಾಗಿದ್ದಾರೆ ಎನ್ನಲಾಗಿದೆ. 

ಪ್ರಜ್ಞೆ ಮರಳಿದ ನಂತರ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News