ಫೈನಾನ್ಸ್ ಕಚೇರಿಯಲ್ಲಿ ಬೆಂಕಿ ಅನಾಹುತ: ದಾಖಲೆಗಳು ಭಸ್ಮ

Update: 2019-07-03 18:19 GMT

ದಾವಣಗೆರೆ, ಜು.3: ಇಲ್ಲಿನ ಪಿ.ಬಿ.ರಸ್ತೆಯ ಶ್ರೀರಾಮ ಫೈನಾನ್ಸ್ ಕಚೇರಿಯಲ್ಲಿ ಬುಧವಾರ ಬೆಳಗ್ಗೆ ಬೆಂಕಿ ಅನಾಹುತ ಸಂಭವಿಸಿದ್ದು, ಕಂಪನಿಗೆ ಸೇರಿದ ದಾಖಲೆಗಳು ಬೆಂಕಿಗೆ ಆಹುತಿಯಾಗಿದೆ.

ಬೆಳಗ್ಗೆ 6 ಗಂಟೆ ಸುಮಾರಿಗೆ ಕಟ್ಟಡದಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದು ಮೂರು ಅಗ್ನಿಶಾಮಕ ವಾಹನಗಳಲ್ಲಿ ಬಂದ ಸಿಬ್ಬಂದಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಸವಪ್ರಭು ಶರ್ಮ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭಿಸಿದರು.

ಅದಾಗಲೇ ಕಟ್ಟಡದೊಳಗೆ ದಟ್ಟ ಹೊಗೆ ತುಂಬಿಕೊಂಡಿದ್ದರಿಂದ ಕಿಟಕಿಗಳ ಗಾಜುಗಳನ್ನು ಒಡೆದು ಹೊಗೆ ಹೊರ ಹೋಗಲು ಮೊದಲು ಅವಕಾಶ ಮಾಡಿಕೊಟ್ಟು ನಂತರ ಅಗ್ನಿ ನಂದಿಸುವ ಕಾರ್ಯ ಆರಂಭಿಸಿದರು. ಸುಮಾರು ಒಂದು ಗಂಟೆ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.

ನಿಯಮಾವಳಿಗಳನ್ನು ಪಾಲಿಸದೇ ಕಟ್ಟಡ ನಿರ್ಮಿಸುವುದರಿಂದಲೇ ಈ ರೀತಿಯ ಅಗ್ನಿ ಅವಘಡಗಳು ನಡೆಯುತ್ತಿವೆ. ಇಂತಹ ಸಂದರ್ಭಗಳಲ್ಲಿ ಕಾರ್ಯಾಚರಣೆ ನಡೆಸುವುದು ಕಷ್ಟವಾಗಲಿದೆ ಎಂದು ಬಸವಪ್ರಭು ಶರ್ಮ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News