ಮೈತ್ರಿ ಸರಕಾರಕ್ಕೆ ಹೊಸ ಸಂಕಷ್ಟ: ರಾಜೀನಾಮೆ ನೀಡುವುದಾಗಿ ಸಚಿವ ವೆಂಕಟರಮಣಪ್ಪ ಎಚ್ಚರಿಕೆ
ಚಿತ್ರದುರ್ಗ, ಜು.4: ವಾಣಿವಿಲಾಸ ಸಾಗರಕ್ಕೆ ಆಗಸ್ಟ್ 10ರೊಳಗೆ ನೀರು ಬಿಡದೇ ಹೋದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕಾರ್ಮಿಕ ಸಚಿವ ವೆಂಕಟರಮಣಪ್ಪ ಮೈತ್ರಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ
ಹಿರಿಯೂರಿನಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಲು ಆಗ್ರಹಿಸಿ ವಕೀಲರು ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ವಕೀಲರ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಜು.30ರ ಒಳಗಾಗಿ ಮಳೆ ಆಗಲಿದೆ ಎಂಬ ನಂಬಿಕೆ ಇದ್ದು, ನಂತರ ವಾಣಿವಿಲಾಸ ಸಾಗರಕ್ಕೆ ನೀರು ಬರುತ್ತದೆ. ಆ.10ರೊಳಗೆ ವಾಣಿ ವಿಲಾಸ ಸಾಗರಕ್ಕೆ ನೀರು ಹರಿಸದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆಂದರು.
ರೈತರಿಗೆ ಕೊಟ್ಟ ಭರವಸೆಯ ಮಾತನ್ನು ಎಂದಿಗೂ ತಪ್ಪುವುದಿಲ್ಲ. ಮುಂದಿನ ತಿಂಗಳು 10ರೊಳಗೆ ವಾಣಿವಿಲಾಸ ಸಾಗರಕ್ಕೆ ನೀರು ಹರಿಸಬೇಕು, ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಅವರು ಹೇಳಿದ್ದಾರೆ