ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರಿಂದ ಧರಣಿ

Update: 2019-07-04 17:24 GMT

ಚಿಕ್ಕಮಗಳೂರು, ಜು.4: ಗ್ರಾಮೀಣ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆಯರು ಹಗಲಿರುಳು ಬಡ ವರ್ಗದವರ, ಅನಾರೋಗ್ಯ ಪೀಡತರ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಜವಬ್ದಾರಿ ನಿರ್ವಹಿಸುತ್ತಿದ್ದಾರೆ. ಆದರೆ ಸರಕಾರ ಇಂತಹ ನೌಕರರ ಸೇವೆಯನ್ನು ನಿರ್ಲಕ್ಷ್ಯ ವಹಿಸಿದೆ. ಅತೀ ಕಡಿಮೆ ವೇತನ ಸೇರಿದಂತೆ ವಿವಿಧ ಸರಕಾರಿ ಸೌಲಭ್ಯಗಳಿಂದ ಆಶಾ ಕಾರ್ಯಕರ್ತೆಯರು ವಂಚಿತರಾಗಿ ಸೇವೆ ಸಲ್ಲಿಸುವಂತಾಗಿದೆ. ಸರಕಾರಗಳೂ ಕೂಡಲೇ ಕಾರ್ಯಕರ್ತೆಯರ ಬೇಡಿಕೆಗಳಿಗೆ ಸ್ಪಂದಿಸಬೇಕೆಂದು ಆಶಾ ಕಾರ್ಯಕರ್ತೆಯರು ಆಗ್ರಹಿಸಿದ್ದಾರೆ.

ಗುರುವಾರ ನಗರದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತಾ ಆಶಾ ಕಾರ್ಯಕರ್ತೆಯರ ಸಂಘದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಧರಣಿ ವೇಳೆ ಮಾತನಾಡಿದ ಸಂಘಟನೆಯ ಜಿಲ್ಲಾ ಸಲಹೆಗಾರ ಎಚ್.ಪಿ ಶಿವಪ್ರಕಾಶ್, ರಾಜ್ಯದ ಆರೋಗ್ಯದ ಇಲಾಖೆಯಡಿ ಜಿಲ್ಲಾದ್ಯಂತ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಬೇರು ಮಟ್ಟದಲ್ಲಿ ಆಶಾ ಕಾರ್ಯಕರ್ತೆಯರು ನೀಡುತ್ತಿರುವ ಸೇವೆ ಮಹತ್ತರವಾದುದು ಎಂದ ಅವರು, ಸುರಕ್ಷಿತ ಹೆರಿಗೆ, ಸ್ವಾಸ್ಥ ಶಿಶುವಿನ ಜನನ, ಆರೈಕೆ ಹಾಗೂ ಆರೋಗ್ಯ ಮತ್ತು ಪೌಷ್ಠಿಕತೆಯ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ ಎಂದರು.

ಕ್ಷಯ, ಕುಷ್ಟ, ಪೋಲಿಯೋ, ಮಲೇರಿಯಾ, ಕಾಲರಾ, ಡೆಂಗ್, ಚಿಕನ್‍ಗುನ್ಯಾ, ಇತ್ಯಾದಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ಆಶಾ ಕಾರ್ಯಕರ್ತೆಯರು ಜಾಗೃತಿ ಮೂಡಿಸುವುದರೊಂದಿಗೆ ಕುಟುಂಬ ಯೋಜನೆ, ಶೌಚಾಲಯ ಬಳಕೆ, ಸಮಗ್ರ ಅಭಿವೃದ್ದಿಯ ಕುರಿತು ಗ್ರಾಮೀಣ ಸಮಾಜದ ಆರೋಗ್ಯಕರ ಜೀವನಕ್ಕೆ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರ ಬಗ್ಗೆ ಸರ್ಕಾರಗಳು ನಿರ್ಲಕ್ಷ್ಯ ಧೋರಣೆ ತಳೆದಿರುವುದು ಖಂಡನೀಯ ಎಂದು ಹೇಳಿದರು.

ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಮತ್ತು ರಾಜ್ಯ ಸರಕಾರಸರ್ಕಾರಗಳು ನೀಡುವ ಪ್ರೋತ್ಸಾಹಧನವನ್ನು ಒಟ್ಟಿಗೆ ಕ್ರೋಢಿಕರಿಸಿ ಮಾಸಿಕ 12ಸಾವಿರ ಗೌರವಧನ ನೀಡಬೇಕು. ಆಶಾ ಸಾಫ್ಟ್ ಮತ್ತು ಆರ್‍ಸಿಎಚ್ ಪೋರ್ಟಲ್‍ಗೆ ಆಶಾ ಪ್ರೋತ್ಸಾಹಧನ ಜೋಡಣೆ ರದ್ದು ಪಡಿಸಬೇಕು. ಕಳೆದ 9 ತಿಂಗಳಿನಿಂದ ಬಾಕಿಯಿರುವ ಆಶಾ ಪ್ರೋತ್ಸಾಹ ಧನವನ್ನು ಒಟ್ಟಿಗೆ ನೀಡಬೇಕು. ಆಶಾ ಕಾರ್ಯಕರ್ತೆಯರಿಗೆ ಕ್ಷೇಮಾಭಿವೃದ್ದಿ ನಿಧಿ ಸ್ಥಾಪಿಸಿ ಸಂಕಷ್ಟದ ಸಮಯದಲ್ಲಿ ಕಾರ್ಪಸ್‍ಫಂಡ್ ಮೀಸಲಿಟ್ಟು ಪರಿಹಾರ ನೀಡಲು ಕ್ರಮ ಕೈಗೊಳ್ಳುವುದು, ನಿವೃತ್ತ ಆಶಾಗಳಿಗೆ ನಿವೃತ್ತಿ ಪರಿಹಾರ ನೀಡುವುದು, ಪ್ರಧಾನಮಂತ್ರಿ ಜೀವನ್‍ ಜ್ಯೋತಿ ಯೋಜನೆ ಹಾಗೂ ಪ್ರಧಾನಮಂತ್ರಿ ಸುರಕ್ಷಾ ಭೀಮಾಯೋಜನೆ ಜಾರಿಗೊಳಿಸಿ ಸಂಪೂರ್ಣ ವಿಮಾ ಕಂತನ್ನು ಸರ್ಕಾರವೇ ಭರಿಸಬೇಕು. ಸರಕಾರ ನಿಯೋಜಿಸುವ ವಿವಿಧ ಸಾಂಕ್ರಾಮಿಕ ರೋಗಗಳ ಸರ್ವೇ ಕಾರ್ಯ ನಿರ್ವಹಿಸಲು ಹಾಗೂ ಸಭೆಗಳಿಗೆ ಹಾಜರಾಗಲು ಕನಿಷ್ಠ 300 ರೂ. ನಿಗಧಿಗೊಳಿಸಬೇಕು. ಆಶಾ ಕಾರ್ಯಕರ್ತೆಯರಿಗೆ ಅವರ ವ್ಯಾಪ್ತಿಯಲ್ಲಿಲ್ಲದ ಕೆಲಸಗಳನ್ನು ಕಡಿತಗೊಳಿಸಬೇಕು. 2 ಸಾವಿರದಿಂದ 2,500 ಜನಸಂಖ್ಯೆಗೆ ಮಾತ್ರ ಕಾರ್ಯನಿರ್ವಹಿಸಲು ಕ್ರಮಕೈಗೊಳ್ಳಬೇಕು. ಪ್ರತೀ 3 ತಿಂಗಳಿಗೊಮ್ಮೆ ಆಶಾ ಕುಂದುಕೊರತೆ ನಿವಾರಣಾ ಸಭೆಯನ್ನು ಸಂಘದ ಪದಾಧಿಕಾರಿಗಳೊಂದಿಗೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಇದಕ್ಕೂ ಮುನ್ನ ಜಿಲ್ಲೆಯ ನೂರಾರು ಮಂದಿ ಆಶಾ ಕಾರ್ಯಕರ್ತೆಯರು ನಗರದ ಬೋಳರಾಮೇಶ್ವರ ದೇವಸ್ಥಾನದ ಆವರಣದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಕುಟುಂಬ ಕಲ್ಯಾಣ ಸಚಿವರಿಗೆ ಮನವಿ ಸಲ್ಲಿಸಿದರು.
ಧರಣಿಯಲ್ಲಿ ಜಿಲ್ಲಾಧ್ಯಕ್ಷೆ ತಾರಾಕೃಷ್ಣ, ಜಿಲ್ಲಾ ಕಾರ್ಯದರ್ಶಿ ಮೈನಾ, ಗೀತಾ, ಜ್ಯೋತಿ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕು ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News