ಕೊಡಗು: 'ಇವಿಎಮ್ ನಿಷೇಧಿಸಿ, ಮತಪತ್ರ ಜಾರಿಗೊಳಿಸಿ' ಅಭಿಯಾನಕ್ಕೆ ಕಾಂಗ್ರೆಸ್ ಚಾಲನೆ
ಮಡಿಕೇರಿ, ಜು.4 : ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಹಿಳಾ ಘಟಕದ ವತಿಯಿಂದ "ಇವಿಎಮ್ ನಿಷೇಧಿಸಿ, ಮತಪತ್ರ ಜಾರಿಗೊಳಿಸಿ, ಪ್ರಜಾಪ್ರಭುತ್ವ ಉಳಿಸಿ" ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಮತಯಂತ್ರಗಳಲ್ಲಿ ಉಂಟಾಗುತ್ತಿರುವ ಗೊಂದಲ ಮತ್ತು ಚುನಾವಣಾ ಫಲಿತಾಂಶಗಳ ಮೇಲಿನ ಸಂಶಯದಿಂದಾಗಿ ಕಾಂಗ್ರೆಸ್ ಪಕ್ಷ ರಾಷ್ಟ್ರವ್ಯಾಪಿ ಈ ಅಭಿಯಾನವನ್ನು ಹಮ್ಮಿಕೊಂಡಿದೆ ಎಂದು ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್ ತಿಳಿಸಿದರು.
ಮತಪತ್ರ ಜಾರಿಗಾಗಿ ಒತ್ತಾಯಿಸಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸುವ ಸಲುವಾಗಿ ಹಮ್ಮಿಕೊಂಡಿರುವ ಪೋಸ್ಟ್ ಕಾರ್ಡ್ ಚಳುವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಶಾಶ್ವತವಾಗಿ ನೆಲೆ ನಿಂತಾಗ ಮಾತ್ರ ಶಾಂತಿ, ಸೌಹಾರ್ದತೆ ಮತ್ತು ಅಭ್ಯುದಯವನ್ನು ಸಾಧಿಸಲು ಸಾಧ್ಯವೆಂದು ಸುರಯ್ಯ ಅಬ್ರಾರ್ ಅಭಿಪ್ರಾಯಪಟ್ಟರು.
ಮಹಿಳಾ ಕಾಂಗ್ರೆಸ್ ನಗರಾಧ್ಯಕ್ಷೆ ಫ್ಯಾನ್ಸಿ ಪಾರ್ವತಿ, ಪ್ರಮುಖರಾದ ಮುಮ್ತಾಜ್ ಬೇಗಂ, ಪ್ರೇಮಕೃಷ್ಣಪ್ಪ, ಪರ್ಜಾನ, ಮಿನಾಝ್ ಪ್ರವೀಣ್, ನಿರ್ಮಲ, ರಾಣಿ, ಉಷಾ ಹಾಗೂ ಮಹಿಳಾ ಕಾರ್ಯಕರ್ತರು ಹಾಜರಿದ್ದರು.