ಬಜೆಟ್ ಜನರ ನಿರೀಕ್ಷೆಗಳನ್ನು ಹುಸಿಯಾಗಿಸಿದೆ: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

Update: 2019-07-05 14:31 GMT

ಬೆಂಗಳೂರು, ಜು.5: ನರೇಂದ್ರ ಮೋದಿ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟು ಜನ ಬಹುಮತದಿಂದ ಆಯ್ಕೆ ಮಾಡಿ ಕಳುಹಿಸಿದ್ದರು. ಆದರೆ ಪ್ರಸ್ತುತ ಕೇಂದ್ರ ಸರಕಾರದ ಬಜೆಟ್ ಜನರ ನಿರೀಕ್ಷೆಗಳನ್ನೆಲ್ಲ ಹುಸಿಯಾಗಿಸಿದೆ ಎಂದು ಶಾಸಕಿ ಹಾಗೂ ಮೈಸೂರು ಮಿನರಲ್ಸ್ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದ್ದಾರೆ.

ಜನ ಸಾಮಾನ್ಯರಿಗೆ ಬಜೆಟ್ ಏನನ್ನೂ ಕೊಟ್ಟಿಲ್ಲ. ಪೆಟ್ರೋಲ್, ಡೀಸೆಲ್, ಆಟೋಮೊಬೈಲ್ ಉಪಕರಣಗಳ ಬೆಲೆಯನ್ನು ಇನ್ನಷ್ಟು ಏರಿಸುವ ಮೂಲಕ ಗಾಯದ ಮೇಲೆ ಮತ್ತೊಂದು ಬರೆ ಎಳೆಯಲಾಗಿದೆ. ಈಗಿನ ಅತ್ಯಂತ ಅಗತ್ಯವಾದ ಉದ್ಯಮ ವಲಯದ ಅಭಿವೃದ್ಧಿಗಾಗಲಿ, ಹೊಸ ಉದ್ಯೋಗ ಸೃಷ್ಟಿಗಾಗಲಿ, ಬಜೆಟ್ ಕೊಡುಗೆ ಏನೂ ಇಲ್ಲ ಎಂದು ಅವರು ಹೇಳಿದ್ದಾರೆ. ಇನ್ನು ಉಳಿದಿರುವ ಪ್ರಸಕ್ತ ಆರ್ಥಿಕ ವರ್ಷದ 8 ತಿಂಗಳ ಬಜೆಟ್ ಮಂಡಿಸುವ ಬದಲು ಮುಂದಿನ 5 ವರ್ಷದ ಯೋಜನೆ ಎನ್ನುವಂತೆ ಬಿಂಬಿಸಿ ಜನರ ದಾರಿ ತಪ್ಪಿಸುವ ಕೆಲಸ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಮುಂದೆ ಏನು ಮಾಡುತ್ತೇವೆ ಎಂದು ಹೇಳುವ ಬದಲು ಹಿಂದಿನ 5 ವರ್ಷದ ಪೋಸ್ಟ್ ಮಾರ್ಟಮ್ ಮಾಡಲಾಗಿದೆ. ಒಟ್ಟಾರೆ ಈ ಬಜೆಟ್ ಸಂಪೂರ್ಣ ನಿರಾಶಾದಾಯಕವಾಗಿದ್ದು ಜನರು ಭ್ರಮನಿರಸನಗೊಳ್ಳುವಂತಾಗಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News