ಮೇವು ಕೊರತೆ: ಜಾನುವಾರುಗಳನ್ನು ತಹಶೀಲ್ದಾರ್ ಕಚೇರಿ ಮುಂದೆ ಕಟ್ಟಿಹಾಕಿದ ರೈತ

Update: 2019-07-10 17:34 GMT

ಮಂಡ್ಯ,ಜು.10: 'ಹಸುಗಳಿಗೆ ಮೇವಿಲ್ಲ. ಮೇವು ನೀಡಿ ಪುಣ್ಯ ಕಟ್ಟಿಕೊಳ‍್ಳಿ' ಎಂದು ರೈತರೊಬ್ಬರು ಮಾಡಿದ್ದ ಮನವಿಗೆ ತಹಶೀಲ್ದಾರ್ ಸ್ಪಂದಿಸದ ಕಾರಣ ತಹಶೀಲ್ದಾರ್ ಕಚೇರಿ ಮುಂದೆಯೇ ರೈತನು ಜಾನುವಾರುಗಳನ್ನು ತಂದು ಕಟ್ಟಿದ ಘಟನೆ ನಡೆದಿದೆ.

ಕೆ.ಆರ್.ಪೇಟೆ ತಾಲೂಕಿನ ಸಾದುಗೋನಹಳ್ಳಿ ರೈತ ರಾಜೇಗೌಡ ಜಾನುವಾರುಗಳನ್ನು ಸಾಕಲು 50 ಸಾವಿರ ರೂಪಾಯಿ ಕೊಟ್ಟು ಮೇವು ಖರೀದಿ ಮಾಡಿದ್ದರು. ಆದರೆ ಸೋಮವಾರ ಆಕಸ್ಮಿಕ ಬೆಂಕಿಯಿಂದ ಮೇವು ಸಂಪೂರ್ಣ ಭಸ್ಮಗೊಂಡಿತ್ತು. ಇದರಿಂದ ನೊಂದ ರೈತ ಜಾನುವಾರುಗಳ ಮೇವಿಗಾಗಿ ತಹಸೀಲ್ದಾರ್ ಶಿವಮೂರ್ತಿ ಬಳಿ ಹೋಗಿ ಮನವಿ ಮಾಡಿದ್ದರು.

ತಹಶೀಲ್ದಾರ್ ಕಚೇರಿಗೆ ಜಾನುವಾರು ಸಹಿತ ಬಂದ ರೈತರಾಜೇಗೌಡರ ಮನವಿಯನ್ನು ತಿರಸ್ಕರಿಸಿದ ತಹಸೀಲ್ದಾರ್, ನಾನು ಎಲ್ಲಿಂದ ಮೇವು ತರಲಿ ಎಂದು ಪ್ರಶ್ನೆ ಮಾಡಿದ್ದರು ಎನ್ನಲಾಗಿದ್ದು, ಇದರಿಂದ ರೊಚ್ಚಿಗೆದ್ದ ರೈತ ತಾನು ಸಾಕಿದ್ದ ಜಾನುವಾರುಗಳನ್ನು ತಹಶೀಲ್ದಾರ್ ಕಚೇರಿಗೆ ತಂದು ನೀವೇ ಸಾಕಿ ಸ್ವಾಮಿ ಎಂದು ದಂಬಾಲು ಬಿದ್ದಿದ್ದಾನೆ.

ರೈತನ ಹೊಸ ಶೈಲಿಯ ಪ್ರತಿಭಟನೆಗೆ ಬೆದರಿದ ತಹಶೀಲ್ದಾರ್ ಶಿವಮೂರ್ತಿ, ಈಗ ಮೇವು ನೀಡುವ ಭರವಸೆ ನೀಡಿದ್ದಾರೆ. ಮೇವು ಸಿಗದೇ ಇದ್ದರೆ ಪರಿಹಾರದ ಭರವಸೆ ನೀಡಿದರು. ಭರವಸೆಯಿಂದ ಸಂತೃಪ್ತಗೊಂಡ ರೈತ ಜಾನುವಾರುಗಳನ್ನು ಮನೆಗೆ ಹಿಡಿದುಕೊಂಡು ಹೋಗಿದ್ದಾನೆ. ಒಂದೊಮ್ಮೆ ಮೇವು ಅಥವಾ ಪರಿಹಾರ ಸಿಗದೇ ಇದ್ದರೆ ಜಾನುವಾರುಗಳನ್ನು ಮತ್ತೆ ತಹಸೀಲ್ದಾರ್ ಕಚೇರಿಗೆ ತಂದು ಬಿಡುವುದಾಗಿ ಎಚ್ಚರಿಕೆ ನೀಡಿದ್ದಾನೆ ಎನ್ನಲಾಗಿದೆ.

ರೈತನ ಹೋರಾಟಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸರ್ಕಾರ ಮೇವಿನ ಬ್ಯಾಂಕ್ ಪ್ರಾರಂಭ ಮಾಡಿತ್ತು. ಎಲ್ಲಾ ಮೇವನ್ನು ರೈತರಿಗೆ ನೀಡಲಾಗಿದೆಯಾ ಎಂದು ಜನ ಪ್ರಶ್ನೆ ಎತ್ತಿದ್ದಾರೆ. ಮೇವು ಕಳೆದುಕೊಂಡ ರೈತರಿಗೆ ಪರಿಹಾರ ನೀಡಿ ಎಂದು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News