ಅತ್ತೆಯನ್ನೆ ಹತ್ಯೆಗೈದಿದ್ದ ಆರೋಪಿಯ ಬಂಧನ

Update: 2019-07-11 11:42 GMT

ಮಡಿಕೇರಿ, ಜು.11: ತನ್ನ ಅತ್ತೆಯನ್ನೆ ಹತ್ಯೆಗೈದು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ವೀರಾಜಪೇಟೆ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ಮನು ಅಲಿಯಾಸ್ ಮುತ್ತ ಎಂಬಾತನೆ ಬಂಧಿತ ಆರೋಪಿಯಾಗಿದ್ದು, ಹತ್ಯೆಗೆ ಬಳಸಿದ್ದ ಮಾರಕಾಯುಧವನ್ನು ವಶಪಡಿಸಿಕೊಳ್ಳಲಾಗಿದೆ.

ಜೂನ್ 8 ರಂದು ವೀರಾಜಪೇಟೆ ಸಮೀಪದ ಕೆ.ಬೋಯಿಕೇರಿ ಗ್ರಾಮದಲ್ಲಿ ವಾಸವಿದ್ದ ತನ್ನ ಅತ್ತೆ ಗೌರಿ ಎಂಬವರನ್ನು ಅಳಿಯ ಮನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ. ಘಟನೆಗೆ ಸಂಬಂಧಿಸಿದಂತೆ ಗೌರಿಯ ಮಗಳು ನೀಡಿದ ದೂರಿನ ಅನ್ವಯ ವೀರಾಜಪೇಟೆ ಗಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗಾಗಿ ಎರಡು ವಿಶೇಷ ತಂಡಗಳನ್ನು ರಚಿಸಿದ್ದರು.

ಚೆಯ್ಯಂಡಾಣೆ ಬೇಕರಿ ಸಮೀಪ ಆರೋಪಿ ಮನುವನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ದುಷ್ಕೃತ್ಯಕ್ಕೆ ಬಳಸಿದ್ದ ಚಾಕು ಮತ್ತು ಮರದ ತುಂಡನ್ನು ವಶಪಡಿಸಿಕೊಳ್ಳಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸುಮನ್ ಪನ್ನೇಕರ್ ಮಾರ್ಗದರ್ಶನದಲ್ಲಿ ವೀರಾಜಪೇಟೆ ಉಪವಿಭಾಗದ ಡಿವೈಎಸ್‍ಪಿ ನಾಗಪ್ಪ ನೇತೃತ್ವದಲ್ಲಿ ವೃತ್ತ ನಿರೀಕ್ಷಕರಾದ ಕ್ಯಾತೆಗೌಡ, ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಎಸ್‍ಐ ಕೆ.ಎನ್.ಸುರೇಶ್ ಬೋಪಣ್ಣ, ಸಿಬ್ಬಂದಿಗಳಾದ ರಾಮಪ್ಪ, ಶ್ರೀನಿವಾಸ ನಾಣಿಯಪ್ಪ, ರಮೇಶ್, ಚಂದ್ರಶೇಖರ್, ಪ್ರವೀಣ್, ಧರ್ಮ ಮತ್ತು ಮೋಹನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಬೋಯಿಕೇರಿ ಗ್ರಾಮದ ಆಟೋ ಚಾಲಕರಾದ ನಿತಿನ್ ಮತ್ತು ವಿನು ಅವರು ಅರೋಪಿಯನ್ನು ಪತ್ತೆ ಹಚ್ಚುವಲ್ಲಿ ಇಲಾಖೆಗೆ ಸಹಕಾರ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News