‘ಸುಪ್ರೀಂ’ ಎದುರು ನನ್ನ ವಕೀಲರಿಂದ ವಾದ: ಸ್ಪೀಕರ್
Update: 2019-07-11 17:01 GMT
ಬೆಂಗಳೂರು, ಜು.11: ಶಾಸಕರ ರಾಜೀನಾಮೆಗೆ ಸಂಬಂಧಿಸಿದಂತೆ ಇಂದು ಸಂಜೆಯೊಳಗೆ ತೀರ್ಮಾನ ಕೈಗೊಳ್ಳುವಂತೆ ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನದ ಕುರಿತು ನನ್ನ ಪರವಾದ ವಕೀಲರು, ನ್ಯಾಯಾಲಯದ ಮುಂದೆ ವಾದ ಮಂಡಿಸಲಿದ್ದಾರೆ ಎಂದು ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹತ್ತು ಶಾಸಕರು ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ್ದಾರೆ. ಆ ಸಂಬಂಧ ವಿಚಾರಣೆ ಮಾಡುತ್ತೇನೆ. ನಮ್ಮ ತೀರ್ಮಾನವನ್ನು ನ್ಯಾಯಾಲಯಕ್ಕೆ ತಿಳಿಸಲಾಗುವುದು. ನನ್ನ ಪರವಾಗಿ ನನ್ನ ವಕೀಲರು ಸುಪ್ರೀಂಕೋರ್ಟ್ಗೆ ಹಾಜರಾಗಲಿದ್ದಾರೆ ಎಂದರು.
ವಕೀಲರು ಏನು ಹೇಳಬೇಕೋ ಅದನ್ನು ನ್ಯಾಯಾಲಯದ ಮುಂದೆಯೇ ಹೇಳುತ್ತಾರೆ. ಆನಂತರ ಏನು ಆಗುತ್ತದೋ ನೋಡೋಣ. ಮೊದಲು ರಾಜೀನಾಮೆ ನೀಡಿರುವ ಶಾಸಕರು ಇಲ್ಲಿಗೆ ಬರಲು, ಪೊಲೀಸರು ಅವರಿಗೆ ಸೂಕ್ತ ಭದ್ರತೆ ಒದಗಿಸುತ್ತಾರೆ. ಕಾನೂನು ರೀತಿ ನಾನು ಕ್ರಮ ಕೈಗೊಳ್ಳುತ್ತೇನೆ ಎಂದು ಅವರು ಹೇಳಿದರು.