ಎಸೆಸೆಲ್ಸಿ ಪೂರಕ ಪರೀಕ್ಷೆ : ಶೇ.42.47 ಫಲಿತಾಂಶ

Update: 2019-07-12 14:38 GMT

ಬೆಂಗಳೂರು, ಜು.12: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಜೂನ್ ತಿಂಗಳಿನಲ್ಲಿ ನಡೆಸಿದ ಎಸೆಸೆಲ್ಸಿ 2019ನೆ ಸಾಲಿನ ಪೂರಕ ಪರೀಕ್ಷೆ ಫಲಿತಾಂಶ ಜು.13ರಂದು ಶಾಲೆಗಳಲ್ಲಿ ಪ್ರಕಟವಾಗಲಿದ್ದು, ಈ ವರ್ಷ ಶೇ.42.47 ಫಲಿತಾಂಶ ಬಂದಿದೆ.

1,92,181 ವಿದ್ಯಾರ್ಥಿಗಳ ಪೈಕಿ 81,614 (ಶೇ.42.47) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಶೇ.39.53 ಬಾಲಕರು ಹಾಗೂ ಶೇ.47.67 ಬಾಲಕಿಯರು ಹಾಗೂ ಶೇ.41.63 ನಗರ ಹಾಗೂ ಶೇ.43.34 ಗ್ರಾಮೀಣ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಶೇ.40.95 ಸರಕಾರಿ, ಶೇ.42.27 ಅನುದಾನಿತ ಮತ್ತು ಶೇ.44.96 ಅನುದಾನ ರಹಿತ ಶಾಲೆಗಳ ಫಲಿತಾಂಶ ಬಂದಿದೆ. 625ಕ್ಕೆ 584 ಅಂಕ, ಅತಿ ಹೆಚ್ಚಿನ ಅಂಕವಾಗಿದೆ. ನಂತರದ ಸ್ಥಾನದಲ್ಲಿ 572, 562 ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿದ್ದಾರೆ. ‘ಎ’ ಪ್ಲಸ್ ಶ್ರೇಣಿಯಲ್ಲಿ ಇಬ್ಬರು, ‘ಎ’ ಶ್ರೇಣಿಯಲ್ಲಿ 343, ‘ಬಿ’ ಪ್ಲಸ್ ಶ್ರೇಣಿಯಲ್ಲಿ 1,838 ಹಾಗೂ ‘ಬಿ’ ಶ್ರೇಣಿಯಲ್ಲಿ 13,035, ‘ಸಿ’ ಪ್ಲಸ್ ಶ್ರೇಣಿಯಲ್ಲಿ 43,479 ಹಾಗೂ ‘ಸಿ’ ಶ್ರೇಣಿಯಲ್ಲಿ 23,049 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.

48 ಮಾನಸಿಕ ಅಸ್ವಸ್ಥರು, 125 ದೈಹಿಕ ಅಂಗವಿಕಲರು, 27 ಕುರುಡರು, 130 ಕಿವುಡ, 18 ವಿವಿಧ ಅಂಗವೈಕಲ್ಯ ಸೇರಿ 512 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಜಿಲ್ಲಾವಾರು ಲಿತಾಂಶದಲ್ಲಿ ದಾವಣಗೆರೆ ಮೊದಲ ಸ್ಥಾನದಲ್ಲಿದ್ದು, ಬೆಂ. ಗ್ರಾಮಾಂತರ ಎರಡನೇ ಸ್ಥಾನದಲ್ಲಿದೆ. ಇನ್ನು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.1.78 ಹೆಚ್ಚಿನ ಫಲಿತಾಂಶ ಪ್ರಕಟವಾಗಿದೆ ಎಂದು ಮಂಡಳಿ ನಿರ್ದೇಶಕಿ ವಿ. ಸುಮಂಗಲಾ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
 
ವೆಬ್‌ಸೈಟ್‌ನಲ್ಲಿ ಫಲಿತಾಂಶ
ಫಲಿತಾಂಶವನ್ನು ಮಂಡಳಿ ವೆಬ್‌ಸೈಟ್ kseeb.karnataka.gov.in/results ಹಾಗೂ  http://karresults.nic.in ನಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ನೋಂದಣಿ ಸಮಯದಲ್ಲಿ ಮಂಡಳಿಗೆ ನೀಡಿರುವ ಮೊಬೈಲ್ ಸಂಖ್ಯೆಗೂ ಶುಕ್ರವಾರ ಮಧ್ಯಾಹ್ನ ಫಲಿತಾಂಶ ಕಳುಹಿಸಲಾಗಿದೆ. ಶಾಲಾ ಲಾಗಿನ್ ಬಳಸಿ ಫಲಿತಾಂಶ ಪಡೆದು ಶಾಲಾ ನೋಟಿಸ್ ಬೋರ್ಡ್‌ನಲ್ಲಿ ಪ್ರಕಟಿಸುವಂತೆ ಶಾಲಾ ಆಡಳಿತ ಮಂಡಳಿಗಳಿಗೆ ಸೂಚಿಸಲಾಗಿದೆ.

ಜು. 24ರವರೆಗೆ ಮರುಮೌಲ್ಯಮಾಪನ
ಉತ್ತರ ಪತ್ರಿಕೆಗಳ ಛಾಯಾಪ್ರತಿ ಮತ್ತು ಮರು ಮೌಲ್ಯಮಾಪನಕ್ಕೆ ಆನ್‌ಲೈನ್ ಮೂಲಕ ಮಂಡಳಿ ವೆಬ್‌ಸೈಟ್ www.kseeb.kar.nic.in  ಅರ್ಜಿ ಸಲ್ಲಿಸಬೇಕು. ಜು.24ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಛಾಯಾ ಪ್ರತಿಗೆ ಪ್ರತಿ ವಿಷಯಕ್ಕೆ 405ರೂ. ಹಾಗೂ ಮರು ಮೌಲ್ಯಮಾಪನಕ್ಕೆ ಪ್ರತಿ ವಿಷಯಕ್ಕೆ 805 ರೂ. ನಿಗದಿ ಮಾಡಲಾಗಿದೆ.

ಹಿಂದೆ ಹೋದ ಹಾಸನ-ರಾಮನಗರ
ಜೂ.21ರಿಂದ 28ರ ವರೆಗೆ ರಾಜ್ಯದ 655 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಅಲ್ಲದೆ, ಮಾರ್ಚ್‌ನಲ್ಲಿ ನಡೆದಿದ್ದ ಪರೀಕ್ಷೆಯಲ್ಲಿ ಮೊದಲ ಸ್ಥಾನದಲ್ಲಿದ್ದ ಹಾಸನ 14ನೇ ಸ್ಥಾನಕ್ಕೆ ಮತ್ತು ರಾಮನಗರ 5ನೇ ಸ್ಥಾನಕ್ಕೆ ಕುಸಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News