ಅನುಮತಿ ಪಡೆಯದೇ ಎಂಜಿನಿಯರಿಂಗ್ ಕಾಲೇಜು ಆರಂಭ: ಪ್ರಮಾಣ ಪತ್ರ ಕಳೆದುಕೊಳ್ಳುವ ಭೀತಿಯಲ್ಲಿ ವಿದ್ಯಾರ್ಥಿಗಳು

Update: 2019-07-17 16:01 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.17: ರಾಜ್ಯ ಸರಕಾರದಿಂದ ಪ್ರವೇಶದ ಅನುಮತಿ ಪಡೆಯದ ಹಿನ್ನೆಲೆಯಲ್ಲಿ 50 ಕ್ಕೂ ಅಧಿಕ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಇದೀಗ ಪದವಿ ಪ್ರಮಾಣ ಪತ್ರ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

2010ರಿಂದ 2014ರ ನಡುವೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ಕ್ಕೆ ಒಳಪಟ್ಟ 50 ಕ್ಕೂ ಅಧಿಕ ಕಾಲೇಜುಗಳು ಪೂರ್ವಾನ್ವಯವಾಗುವಂತೆ ಅನುಮತಿ ನೀಡಬೇಕು ಎಂದು ಸರಕಾರವನ್ನು ಒತ್ತಾಯಿಸಿವೆ. ಕೆಲವು ವರ್ಷಗಳ ಹಿಂದೆ ಇದರಲ್ಲಿ ಕೆಲವು ಕಾಲೇಜುಗಳು ಅಂದಿನ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರಿಗೂ ಪತ್ರ ಬರೆದಿದ್ದವು. ಆದರೆ ಇದು ಕಾನೂನುಬಾಹಿರ ಎಂದು ನಿರಾಕರಣೆ ಮಾಡಲಾಗಿತ್ತು.

ಇದೀಗ ಈ ಕಾಲೇಜುಗಳು ಸರಕಾರಕ್ಕೆ ಪತ್ರ ಬರೆದಿದ್ದು, ಒಟ್ಟಾಗಿ ಒತ್ತಾಯ ಮಾಡುತ್ತಿದೆ. ಈ ಸಂಬಂಧ ಗಮನ ನೀಡಲು ಉನ್ನತ ಶಿಕ್ಷಣ ಇಲಾಖೆ ಸಮಿತಿಯೊಂದನ್ನೂ ರಚಿಸಲಾಗಿದೆ. ಎಂಜಿನಿಯರಿಂಗ್ ಕಾಲೇಜ್‌ಗಳ ಸೀಟು ಹೆಚ್ಚಳ ಅಥವಾ ಹೊಸ ಕೋರ್ಸ್ ಆರಂಭಕ್ಕೆ ಅಧಿಕೃತ ಒಪ್ಪಿಗೆ ಪಡೆಯಬೇಕಿದೆ. ಆದರೆ, ಇದೀಗ ಅರ್ಜಿ ಸಲ್ಲಿಸಿರುವ ಕಾಲೇಜುಗಳಲ್ಲಿ ಅನುಮತಿಯಿಲ್ಲದೆ ಪ್ರವೇಶಕ್ಕೆ ವಿಟಿಯು ಹೇಗೆ ಅನುಮತಿ ಕಲ್ಪಿಸಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಲಕ್ಷಾಂತರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ಭವಿಷ್ಯದಲ್ಲಿ ಯಾವುದೇ ಕಾನೂನು ತೊಡಕು ನಿವಾರಿಸುವ ಸಲುವಾಗಿ ಈ ಸಮಿತಿ ರಚಿಸಲಾಗಿದ್ದು, ಅದು ನೀಡುವ ವರದಿಯ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ವಿಟಿಯು ಕುಲಪತಿ ಪ್ರೊ.ಕರಿಸಿದ್ದಪ್ಪ ಮುಖ್ಯಸ್ಥರಾಗಿದ್ದು, ನಿವೃತ್ತ ಕುಲಪತಿ ಪ್ರೊ.ಎಚ್.ಪಿ.ಖಿಂಚಾ ಸಮಿತಿಯ ಸದಸ್ಯರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News