ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್ ಜೊತೆ ವಿಮಾನ ನಿಲ್ದಾಣದಲ್ಲಿ ಬಿಜೆಪಿಯ ಲಕ್ಷ್ಮಣ್ ಸವದಿ: ಫೋಟೋ ವೈರಲ್

Update: 2019-07-18 13:43 GMT

ಬೆಂಗಳೂರು, ಜು.18: ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್ ಅವರನ್ನು ಬಿಜೆಪಿಯವರು ಅಪಹರಿಸಿ ಮುಂಬೈಗೆ ಕರೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿ ಸದನದಲ್ಲಿ ಕಾಂಗ್ರೆಸ್ ಸದಸ್ಯರು ಕೆಲವು ಫೋಟೋಗಳನ್ನು ಪ್ರದರ್ಶಿಸಿದ ಬೆನ್ನಿಗೇ, ವಿಮಾನ ನಿಲ್ದಾಣದಲ್ಲಿ ಶ್ರೀಮಂತ ಪಾಟೀಲ್ ಜೊತೆ ಬಿಜೆಪಿ ನಾಯಕ, ಮಾಜಿ ಸಚಿವ ಲಕ್ಷ್ಮಣ್ ಸವದಿ ಇರುವ ಫೋಟೋ ವೈರಲ್ ಆಗಿದೆ.

'ಬಿಜೆಪಿಯವರೇ ಅವರನ್ನು ರೆಸಾರ್ಟ್ ನಿಂದ ಅಪಹರಿಸಿದ್ದಾರೆ. ಹೃದಯ ಸಂಬಂಧಿ ಕಾಯಿಲೆ ಇರುವವರು ಚೆನೈಗೆ ಹೋಗಿ, ಮುಂಬೈಗೆ ಹೋಗಲು ಹೇಗೆ ಸಾಧ್ಯ? ಪಕ್ಕದಲ್ಲೇ ಆಸ್ಪತ್ರೆ ಇದ್ದರೂ ಮುಂಬೈಗೆ ಹೋಗಿದ್ದು ಏಕೆ ಎಂದು ಸದನದಲ್ಲಿ ಕಾಂಗ್ರೆಸ್ ಸದಸ್ಯರು ಪ್ರಶ್ನಿಸಿದರು. ಅವರನ್ನು ಅಪಹರಿಸಿದ್ದಾರೆ ಎಂದು ಆರೋಪಿಸಿ ಸಚಿವ ಡಿ.ಕೆ.ಶಿವಕುಮಾರ್ ಸದನಕ್ಕೆ ಕೆಲ ಸಾಕ್ಷಿಗಳನ್ನು ನೀಡಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಾಗೂ ವಿಮಾನದ ಟಿಕೆಟ್ ನ ಫೋಟೋ ಪ್ರದರ್ಶಿಸಿದ್ದರು. 

ಬಳಿಕ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಬುಧವಾರ ನಮ್ಮ ಜೊತೆ ಇದ್ದ ಶ್ರೀಮಂತ ಪಾಟೀಲ್ ರನ್ನು ಬಿಜೆಪಿ ಅಪಹರಿಸಿದೆ. ಬೆಂಗಳೂರಿನಿಂದ ಚೆನ್ನೈಗೆ, ಮತ್ತೆ ಬೆಳಗ್ಗೆ ಚೆನ್ನೈನಿಂದ ಮುಂಬೈಗೆ ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಗೆ ದಾಖಲಾಗಿರುವ ಫೋಟೋಗಳನ್ನು ಹರಿಬಿಡಲಾಗಿದೆ. ಅಲ್ಲದೇ, ನಮ್ಮ ಶಾಸಕರ ಜೊತೆ ಬಿಜೆಪಿಯ ಲಕ್ಷ್ಮಣ್ ಸವದಿ ಹಾಗೂ ಇತರೆ ನಾಯಕರು ಪ್ರಯಾಣಿಸಿದ್ದಾರೆಂದು ಆರೋಪಿಸಿ ವಿಮಾನಯಾನದ ಟಿಕೆಟ್ ಪ್ರದರ್ಶಿಸಿದ್ದರು. 

ಇದೀಗ ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್ ಅವರನ್ನು ಬಿಜೆಪಿಯ ಲಕ್ಷ್ಮಣ್ ಸವದಿ ವಿಮಾನ ನಿಲ್ದಾಣದಲ್ಲಿ ಭೇಟಿಯಾದ ಹಾಗೂ ಅವರ ಜೊತೆ ಹೋಗುತ್ತಿರುವ ಫೋಟೋಗಳು ವೈರಲ್ ಆಗುತ್ತಿದ್ದು, ಕಾಂಗ್ರೆಸ್ ನಾಯಕರ ಆರೋಪಕ್ಕೆ ಪುಷ್ಠಿ ನೀಡುವಂತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News