ನನ್ನ ಆರೋಪ ಸುಳ್ಳು ಎಂಬುದನ್ನು ವಿಧಾನಸೌಧಕ್ಕೆ ಬಂದು ಸಾಬೀತುಪಡಿಸಲಿ: ಎಚ್.ವಿಶ್ವನಾಥ್ ಗೆ ಸಾ.ರಾ.ಮಹೇಶ್ ಸವಾಲು

Update: 2019-07-20 13:27 GMT
ಎಚ್.ವಿಶ್ವನಾಥ್-ಸಾ.ರಾ.ಮಹೇಶ್

ಮೈಸೂರು, ಜು.20: ನಾನು ಶಾಸಕ ವಿಶ್ವನಾಥ್ ಬಗ್ಗೆ ನೀಡಿರುವ ಹೇಳಿಕೆಗೆ ಈಗಲೂ ಬದ್ಧ. ಇದು ಸುಳ್ಳು ಎನ್ನುವುದಾದರೆ ವಿಧಾನಸೌದಕ್ಕೆ ಬಂದು ಸಾಬೀತುಪಡಿಸಲಿ ಎಂದು ಸಚಿವ ಸಾ.ರಾ.ಮಹೇಶ್ ಸವಾಲು ಹಾಕಿದರು.

ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಹೇಳಿಕೆಗೆ ಬದ್ಧ, ಅವರು ಇದನ್ನು ಸುಳ್ಳು ಎಂಬುದನ್ನು ಸಾಬೀತುಪಡಿಸಲಿ. ನಾವು ಏನು ಬೇಕಾದರೂ ಹೇಳಬಹುದು. ನಮಗೆ ಆತ್ಮಸಾಕ್ಷಿ ಎಂಬುದು ಇದೆ. ಅದಕ್ಕೆ ಸುಳ್ಳು ಹೇಳಲು ಸಾಧ್ಯವಿಲ್ಲ ಎಂದ ಅವರು, ನಾನು ಅಮೇರಿಕಾಗೆ ಹೋಗುವ ಮುನ್ನ ಅವರನ್ನು ಕರೆಸಿ ಮಾತನಾಡಿದ್ದೇನೆ. ಸರ್, ನೀವು ಸಚಿವರಾಗಬೇಕು ಎಂದರೆ ನಾನೇ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದೇನೆ. ಅಂತಹದರಲ್ಲಿ ಬೇಡ ಎಂದು ಹೇಳಿ ನಂಬಿಕೆ ದ್ರೋಹ ಮಾಡಿದರು ಎಂದು ಕಿಡಿಕಾರಿದರು.

ನನ್ನನ್ನು ರಿಯಲ್ ಎಸ್ಟೇಟ್ ಆಸಾಮಿ ಎಂದಿದ್ದಾರೆ. ಹೌದು ನಾನು ರಿಯಲ್ ಎಸ್ಟೇಟ್ ಮಾಡುತ್ತೇನೆ. ಇವರು 9 ಚುನಾವಣೆಗಳನ್ನು ಎದುರಿಸಿದ್ದಾರಲ್ಲ, ಇವರಿಗೆ ಎಲ್ಲಿಂದ ಹಣ ಬಂತು ಎಂದು ಪ್ರಶ್ನಿಸಿದರು.

ನಾವು ಅಮೇರಿಕಾಗೆ ಹೋಗುವ ಮುನ್ನ ಆಪರೇಷನ್ ಕಮಲದ ವಾಸನೆ ಬಂದಿತ್ತು. ಅಮೇರಿಕದಲ್ಲಿ ಸಿಎಂ ಅವರನ್ನು ವಾಪಸ್ ಹೋಗೋಣ ಎಂದು ಹೇಳಿದ್ದೆ. ಆದರೆ ಅವರು ಎಷ್ಟು ದಿನ ಅಂತ ನಾವು ತಡೆಯುವುದು ಎಂದು ಹೇಳಿದ್ದರು. ಆದರೂ ನಾವು ವಿಶ್ವಾಸ ಮತಯಾಚನೆ ಮಾಡುತ್ತೇವೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News