ಎರಡು-ಮೂರು ದಿನದಲ್ಲಿ ಬಿಎಸ್‌ವೈ ಮುಖ್ಯಮಂತ್ರಿ: ಜನಾರ್ದನ ರೆಡ್ಡಿ

Update: 2019-07-21 16:32 GMT

ಬೆಂಗಳೂರು, ಜು.21: ಮುಂದಿನ ಎರಡು-ಮೂರು ದಿನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ತಿಳಿಸಿದ್ದಾರೆ.

ನಗರದಲ್ಲಿ ಆಯೋಜಿಸಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಯೇ ಬಿಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಬೇಕಿತ್ತು. ಆದರೆ, ಕೇವಲ ಎಂಟತ್ತು ಸೀಟುಗಳ ಕೊರತೆಯಿಂದ ಕೈ ತಪ್ಪಿತು ಎಂದು ತಿಳಿಸಿದರು.

ಧರ್ಮ ಒಡೆದವರನ್ನು ಶಿವ ಮೂರನೇ ಕಣ್ಣು ಭಸ್ಮ ಮಾಡುತ್ತಾನೆಂದು ಹೇಳಿದ್ದೆ. ಅದು ಈಗ ನಿಜವಾಗಿರುವಂತೆ ಸಿದ್ದರಾಮಯ್ಯ ನೇತೃತ್ವದ ಸರಕಾರ ಭಸ್ಮ ಆಗಿದೆ. ಅಲ್ಪಸ್ವಲ್ಪ ಉಳಿದಿರುವ ಮೈತ್ರಿ ಸರಕಾರ ಎರಡು ದಿನದಲ್ಲಿ ಸಂಪೂರ್ಣ ಭಸ್ಮ ಆಗಲಿದೆ. ಇದರ ಬೆನ್ನಲ್ಲೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿದ್ದಾರೆ. ಇದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಲ್ಲಿ ರಾಜ್ಯದ ಯಾವುದಾದರೊಂದು ಸ್ಥಳದಲ್ಲಿ 500 ಎಕರೆ ಪ್ರದೇಶದಲ್ಲಿ ಪಂಚಾಚಾರ್ಯರು ಹಾಗೂ ರೇಣುಕಾಚಾರ್ಯರ ತಲಾ 100 ಅಡಿ ಎತ್ತರದ ಪ್ರತಿಮೆ ಸ್ಥಾಪಿಸಿ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ಶ್ರಮಿಸೋಣ. ಅಲ್ಲಿ ವಾರ್ಷಿಕ ಸಮಾರಂಭದಲ್ಲಿ ದೇಶದ ನಾನಾ ಭಾಗಗಳಿಂದ ಜನ ಬರುವಂತೆ ಮಾಡುವ ಬೃಹತ್ ಯೋಜನೆ ರೂಪಿಸಲು ಶ್ರಮವಹಿಸಲಾಗುವುದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News