ರಾಜ್ಯದ ರಾಜಕೀಯ ಬಿಕ್ಕಟ್ಟು ಸೋಮವಾರ ಸುಖಾಂತ್ಯ: ಡಿ.ವಿ.ಸದಾನಂದ ಗೌಡ
ಬೆಂಗಳೂರು, ಜು.21: ರಾಜ್ಯದಲ್ಲಿ ಸಂಭವಿಸಿರುವ ರಾಜಕೀಯ ಬಿಕ್ಕಟ್ಟು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೋಮವಾರ(ಇಂದು) ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸುವುದರ ಮೂಲಕ ಸುಖಾಂತ್ಯ ಆಗಲಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿಗೆ ಶುಕ್ರವಾರವೆ ವಿಶ್ವಾಸಮತಯಾಚನೆ ಮಾಡಬೇಕೆಂದು ಗಡುವು ನೀಡಿದ್ದರು. ಆದರೆ, ಎಚ್.ಡಿ.ಕುಮಾರಸ್ವಾಮಿ ಸೋಮವಾರ ಮಾಡುವುದಾಗಿ ಹೇಳಿ ಮುಂದೂಡಿದ್ದರು. ಅವರು ಮಾತಿನಂತೆ ನಡೆದುಕೊಂಡರೆ ನಾಳೆಯೆ ರಾಜ್ಯದ ಬಿಕ್ಕಟ್ಟು ಶಮನವಾಗಲಿದೆ ಎಂದು ತಿಳಿಸಿದರು.
ಬಿಜೆಪಿ ಯಾವತ್ತೂ ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ಮೀರಿ ಹೋಗುವುದಿಲ್ಲ. ರಾಜ್ಯ ಸರಕಾರ ವಿಶ್ವಾಸಮತ ಕಳೆದುಕೊಂಡಿರುವುದರಿಂದ ರಾಜಕೀಯ ಬಿಕ್ಕಟ್ಟು ಶುರುವಾಗಿದೆ. ಹೀಗಾಗಿ ಎಚ್.ಡಿ.ಕುಮಾರಸ್ವಾಮಿಯೆ ವಿಶ್ವಾಸಮತ ಯಾಚಿಸುತ್ತೇನೆಂದು ಬಯಸಿದ್ದರು. ಅದನ್ನು ಶೀಘ್ರವೆ ಮಾಡುವಂತೆ ನಾವು ಒತ್ತಾಯಿಸುತ್ತಿದ್ದೇವೆಂದು ಅವರು ಹೇಳಿದರು.