ವಾಲಿಬಾಲ್ ಆಡುತ್ತಿದ್ದಾಗ ಕುಸಿದು ಬಿದ್ದು ವಿದ್ಯಾರ್ಥಿ ಮೃತ್ಯು
Update: 2019-07-23 12:52 GMT
ಬಾಗೇಪಲ್ಲಿ, ಜು.23: ತಾಲೂಕಿನ ಯಲ್ಲಂಪಲ್ಲಿ ಸರಕಾರಿ ಪ್ರೌಡಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿ ಜಿ.ಎನ್.ನಂದೀಶ(15) ಶಾಲಾ ಆವರಣದಲ್ಲಿ ವಾಲಿಬಾಲ್ ಆಟವಾಡುತ್ತಿದ್ದಾಗ ಹೃದಯಫಾತ ಸಂಭವಿಸಿ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ಯಲ್ಲಂಪಲ್ಲಿ ಗ್ರಾಪಂ ವ್ಯಾಪ್ತಿಯ ಗುವ್ವಲವಾರಿಪಲ್ಲಿ ಗ್ರಾಮದ ನಾರಾಯಣಪ್ಪ ಪುತ್ರ ಜಿ.ಎನ್.ನಂದೀಶ ಗ್ರಾಮದ ಸರಕಾರಿ ಪ್ರೌಡಶಾಲೆಯಲ್ಲಿ ಬಿಡುವಿನ ವೇಳೆ ವಾಲಿಬಾಲ್ ಪಂದ್ಯವಾಡುತ್ತಿದ್ದಾಗ ಕುಸಿದು ಬಿದ್ದಿದ್ದು, ತಕ್ಷಣ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದು, ಆದರೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.