ಕನ್ನಡ & ಸಂಸ್ಕೃತಿ ಇಲಾಖೆಯಿಂದ ಸಂಘ-ಸಂಸ್ಥೆಗಳಿಗೆ ವಾರ್ಷಿಕ ಅನುದಾನ ಬಿಡುಗಡೆ

Update: 2019-07-24 17:23 GMT

ಬೆಂಗಳೂರು, ಜು.24: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2018-19 ನೆ ಸಾಲಿನಲ್ಲಿ ಧನಸಹಾಯಕ್ಕೆ ಆಯ್ಕೆಯಾಗಿದ್ದ ಸಾಂಸ್ಕೃತಿಕ ಸಂಘ-ಸಂಸ್ಥೆಗಳಿಗೆ ನೀಡುವ ಸಹಾಯಧನವನ್ನು ಬಿಡುಗಡೆ ಮಾಡಿದೆ.

ಹಿಂದಿನ ವರ್ಷ ಧನಸಹಾಯ ಪ್ರಕ್ರಿಯೆ ಅಂತಿಮವಾಗುವ ವೇಳೆ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದರಿಂದ ವಿಳಂಬವಾಗಿತ್ತು. ಹೀಗಾಗಿ, ಧನಸಹಾಯ ಪ್ರಕ್ರಿಯೆ ಸ್ಥಗಿತ ಮಾಡಿದ್ದರು. ಈ ಯೋಜನೆಯ ಅನುದಾನವನ್ನು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಪ್ರತ್ಯೇಕವಾಗಿಡಲಾಗಿತ್ತು. ಇದೀಗ ವಿವಿಧ ಸಂಘ-ಸಂಸ್ಥೆಗಳಿಗೆ, ವಾದ್ಯ ಪರಿಕರಗಳ ಖರೀದಿಗೆ ಹಾಗೂ ಚಿತ್ರಕಲೆಗೆ ಸುಮಾರು 11.60 ಕೋಟಿ ರೂ.ಗಳಷ್ಟು ಹಂಚಿಕೆ ಮಾಡಲಾಗಿದೆ.

ರಾಜ್ಯದ 593 ಸಂಘ-ಸಂಸ್ಥೆಗಳಿಗೆ ಅನುದಾನ ಹಂಚಿಕೆ ಮಾಡಲಾಗಿದ್ದು, ಚಿತ್ರಕಲೆ, ಶಿಲ್ಪಕಲೆ ಪ್ರದರ್ಶನಕ್ಕೆ 193 ಮಂದಿ ಕಲಾವಿದರಿಗೆ ಅನುದಾನ ನೀಡಲಾಗಿದೆ. ಅದೇ ರೀತಿಯಲ್ಲಿ ವಾದ್ಯ ಪರಿಕರ ಹಾಗೂ ವೇಷಭೂಷಣ ವಿಭಾಗದಲ್ಲಿ 363 ಮಂದಿ ಅನುದಾನ ಪಡೆದುಕೊಂಡಿದ್ದಾರೆ.

ಧಾರವಾಡ ಜಿಲ್ಲೆಯ ಸಾಹಿತ್ಯ ಸಂಭ್ರಮ ಟ್ರಸ್ಟ್, ಬೆಂಗಳೂರು ನಗರದ ರಂಗ ನಿರಂತರ ಸಾಂಸ್ಕೃತಿಕ ಸಂಘ, ಇಂದಿರಾನಗರದ ಸಂಗೀತ ನಭಾ ಅತಿ ಹೆಚ್ಚು ಅನುದಾನ (ತಲಾ 15 ಲಕ್ಷ ರೂ.ಗಳು) ಪಡೆದಿವೆ. ಇನ್ನುಳಿದಂತೆ ಸಹಾಯಧನ ಪಟ್ಟಿ ಬಿಡುಗಡೆಯಾದ ಕೂಡಲೇ ಕೆಲವು ಸಂಘ-ಸಂಸ್ಥೆಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಸಿಕ್ಕಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಯ್ಕೆ ಸಲಹಾ ಸಮಿತಿಯು ಪರಿಶೀಲಿಸಿ, ಸೂಚಿಸಿದ ಕೆಲ ಸಂಘ-ಸಂಸ್ಥೆಗಳನ್ನು ಸರಕಾರ ಕೈ ಬಿಟ್ಟಿದೆ. ಅಲ್ಲದೆ, ಕೆಲ ಸಂಘ-ಸಂಸ್ಥೆಗಳಿಗೆ ಅನುದಾನವನ್ನು ಕಡಿಮೆ ಮಾಡಲಾಗಿದೆ. ಸಾಣೇಹಳ್ಳಿ ರಂಗಶಿಕ್ಷಣ ಕೇಂದ್ರಕ್ಕೆ ಪ್ರತಿಬಾರಿಯೂ 50 ಲಕ್ಷದಷ್ಟು ಅನುದಾನ ನೀಡುತ್ತಿದ್ದರು. ಆದರೆ, ಈ ಬಾರಿ ಕೇವಲ 10 ಲಕ್ಷ ನೀಡಲಾಗಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಹಾಗೂ ಧನ ಸಹಾಯ ಆಯ್ಕೆ ಸಮಿತಿ ಸದಸ್ಯ ಜೆ.ಲೋಕೇಶ್ ಅಸಮಾಧಾನ ಹೊರಹಾಕಿದ್ದಾರೆ.

ಅಗತ್ಯ ದಾಖಲೆಗಳನ್ನು ಸಲ್ಲಿಸದ ಸಂಘ-ಸಂಸ್ಥೆಗಳನ್ನು ಪಟ್ಟಿಯಿಂದ ಕೈ ಬಿಡಲಾಗಿದೆ. ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಘ-ಸಂಸ್ಥೆಗಳಿಗೆ ಅನುದಾನ ನೀಡಲಾಗಿದೆ. ಕನಿಷ್ಠ 50 ಸಾವಿರದಿಂದ ಗರಿಷ್ಠ 15 ಲಕ್ಷದವರೆಗೂ ಅನುದಾನ ಹಂಚಿಕೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹೊಸ ನೀತಿ ಜಾರಿ: 2019-20 ನೆ ಸಾಲಿನಲ್ಲಿ ಸಂಘ-ಸಂಸ್ಥೆಗಳಿಗೆ ಅನುದಾನ ಹಂಚಿಕೆ ಸಂಬಂಧ ಹೊಸ ನೀತಿ ಜಾರಿಗೆ ತರುವ ಚಿಂತನೆಯಿದೆ. ಇದರಿಂದ ಧನ ಸಹಾಯಕ್ಕೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸುವ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News