ಸಿದ್ದರಾಮಯ್ಯ, ಎಂ.ಬಿ.ಪಾಟೀಲ್ ದಾರಿ ತಪ್ಪಿದ ಮಕ್ಕಳು: ಶಾಸಕ ಎಚ್.ವಿಶ್ವನಾಥ್

Update: 2019-07-27 13:06 GMT

ಬೆಂಗಳೂರು, ಜು. 27: ‘ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಸೇರಿದಂತೆ ಅವರ ಜತೆ ಇರುವವರೆ ದಾರಿ ತಪ್ಪಿದ ಮಕ್ಕಳೇ ಹೊರತು ನಾವಲ್ಲ’ ಎಂದು ರಾಜೀನಾಮೆ ನೀಡಿರುವ ಅತೃಪ್ತ ಶಾಸಕ ಎಚ್.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ಮುಂಬೈನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜೀನಾಮೆ ನೀಡಿರುವ ಯಾವ ಶಾಸಕರೂ ಯಾರನ್ನೂ ಸಂಪರ್ಕಿಸಿಲ್ಲ. ಮೈತ್ರಿ ನಾಯಕರೂ ನಮ್ಮನ್ನು ಸಂಪರ್ಕಿಸಿಲ್ಲ. ಎಂ.ಬಿ.ಪಾಟೀಲ್ ಸೇರಿ ಕಾಂಗ್ರೆಸ್ ನಾಯಕರ ಹೇಳಿಕೆಗಳು ಸುಳ್ಳು ಎಂದು ಹೇಳಿದರು.

‘ಅತೃಪ್ತ ಶಾಸಕರು ಸಿದ್ದರಾಮಯ್ಯನವರನ್ನು ಸಂಪರ್ಕಿಸಿದರು. ಆದರೆ, ಅವರು ಕರೆ ಸ್ವೀಕರಿಸಲಿಲ್ಲ’ ಎಂಬುದು ಶುದ್ಧ ಸುಳ್ಳು. ಗೊಂದಲ ಸೃಷ್ಟಿಸಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಈ ರೀತಿ ಸುಳ್ಳು ಹೇಳಿ ದಾರಿ ತಪ್ಪಿಸುತ್ತಿದ್ದಾರೆ. ಆದರೆ ಯಾರೂ ದಾರಿ ತಪ್ಪುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ರಾಜ್ಯ ರಾಜಕಾರಣದ ಮೂವತ್ತು ದಿನಗಳ ಬೆಳವಣಿಗೆಯಲ್ಲಿ ಅವರು ದಾರಿ ತಪ್ಪಿದ ಮಕ್ಕಳು ಎಂದು ಲೇವಡಿ ಮಾಡಿದ ವಿಶ್ವನಾಥ್, ನಮ್ಮನ್ನು ಯಾರೂ ಸಂಪರ್ಕಿಸಿಲ್ಲ. ಅವರು ಪ್ರಯತ್ನಿಸಿದರೂ ಯಾರೂ ಅವರೊಂದಿಗೆ ಹೋಗಲು ಸಿದ್ಧರಿಲ್ಲ. ನಾವು ಎಲ್ಲವನ್ನೂ ಎದುರಿಸಲು ಸಿದ್ಧರಿದ್ದೇವೆ ಎಂದು ಹೇಳಿದರು.

ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ನಾವೆಲ್ಲಾ ಒಟ್ಟಾಗಿದ್ದರಿಂದಲೇ ಸರಕಾರ ಬಿದ್ದಿದ್ದು, ಇವರ ಬೆದರಿಕೆ ಮಾತನ್ನು ಯಾರೂ ಕೇಳುವುದಿಲ್ಲ. ಯಾರಿಗೆ ಯಾರ ಭಯವೂ ಇಲ್ಲ. ನಮ್ಮನ್ನು ಸಂಪರ್ಕಿಸುವ ಧೈರ್ಯ ಯಾರ ಬಳಿಯೂ ಇಲ್ಲ. ಎಲ್ಲರೂ ಬಹಳ ಗಟ್ಟಿಯಾಗಿದ್ದೇವೆ. ನಾಲ್ಕೈದು ದಿನಗಳಲ್ಲಿ ಮರಳಿ ರಾಜ್ಯಕ್ಕೆ ಬರುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News