ಯುಎಪಿಎ ತಿದ್ದುಪಡಿ ಮಸೂದೆ ಸೋಲಿಸಿ: ರಾಜ್ಯಸಭಾ ಸಂಸದರಿಗೆ ಪತ್ರ ಬರೆದ ಪಿಎಫ್‌ಐ

Update: 2019-07-27 13:29 GMT

ಹೊಸದಿಲ್ಲಿ, ಜು.27: ಲೋಕಸಭೆ ಅಂಗೀಕರಿಸಿದ ಯುಎಪಿಎ ತಿದ್ದುಪಡಿ ಮಸೂದೆಯನ್ನು ಮೇಲ್ಮನೆಯಲ್ಲಿ ಮತ ಚಲಾಯಿಸುವ ಮೂಲಕ ಸೋಲಿಸಬೇಕೆಂದು ಒತ್ತಾಯಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪ್ರಧಾನ ಕಾರ್ಯದರ್ಶಿ ಎಂ.ಮುಹಮ್ಮದ್ ಅಲಿ ಜಿನ್ನಾ ರಾಜ್ಯಸಭಾ ಸಂಸದರಿಗೆ ಮನವಿ ಮಾಡಿದ್ದಾರೆ.

ವಿವಾದಾತ್ಮಕ ಎನ್‌ಐಎ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲು ಅವಕಾಶ ನೀಡುವ ಮೂಲಕ ಅವರು ಮಾಡಿದ ತಪ್ಪನ್ನು ಎನ್‌ಡಿಎಯೇತರ ಪಕ್ಷಗಳು ಬಹುಮತ ಇರುವ ರಾಜ್ಯಸಭೆಯಲ್ಲಿ ಪುನರಾವರ್ತಿಸಬಾರದು ಎಂದು ತಿಳಿಸಿದ್ದಾರೆ.

ಈ ಕುರಿತು ಪತ್ರಬರೆದಿರುವ ಅವರು, ಲೋಕಸಭೆಯು ಕಾನೂನು ಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2019ನ್ನು ಜು.24ರಂದು ಅಂಗೀಕರಿಸಿದೆ ಎಂಬ ಅಂಶವನ್ನು ನಾವು ನಿರಾಶದಾಯಕವಾಗಿ ತಿಳಿದಿದ್ದೇವೆ. ಸಮಂಜಸವಾದ ಪ್ರಶ್ನೆಗಳು ಮತ್ತು ಕಾಳಜಿ ಮೂಲಕ ಪ್ರತಿಪಕ್ಷದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರೂ, ಈ ಮಸೂದೆ ಅಂಗೀಕಾರವಾಗಿರುವುದು ದುರಂತ. ಕಳೆದ ಐದು ವರ್ಷಗಳಲ್ಲಿ ಯುಎಪಿಎಯನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಎಲ್ಲ ರೀತಿಯ ಪ್ರಜಾಪ್ರಭುತ್ವ ಅಭಿವ್ಯಕ್ತಿಗೆ ವಿರುದ್ಧವಾಗಿ ದುರುಪಯೋಗ ಪಡಿಸಿಕೊಂಡಿದೆ. ಸರಕಾರವನ್ನು ವಿರೋಧಿಸುವ ಮುಸ್ಲಿಮರು, ದಲಿತರು ಮತ್ತು ಕಾರ್ಯಕರ್ತರನ್ನು ಗುರಿಯಾಗಿಸಲು ಇದನ್ನು ಬಳಸಲಾಯಿತು. ಈಗ ಇನ್ನಷ್ಟು ಹೆಚ್ಚು ಕಠಿಣವಾದ ನಿಬಂಧನೆ ಸೇರಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಸಾಮಾನ್ಯ ವ್ಯಕ್ತಿಗಳನ್ನು ಭಯೋತ್ಪಾದಕರನ್ನಾಗಿ ಚಿತ್ರಿಸುವ ನಿರಂಕುಶ ಪ್ರವೃತ್ತಿ ಹೊಂದಿರುವ ಕೋಮುವಾದಿ ಪಕ್ಷಪಾತದ ಸರಕಾರಕ್ಕೆ ಇನ್ನೂ ಹೆಚ್ಚಿನ ಅಧಿಕಾರ ನೀಡುವುದು, ನಾಗರಿಕ ಸ್ವಾತಂತ್ರ್ಯಗಳ ಉಲ್ಲಂಘನೆಗೆ ಬಾಗಿಲು ತೆರೆಯುವುದಕ್ಕೆ ಸಮಾನವಾಗಿದೆ. ಇದು ನಮ್ಮ ಸ್ವಾತಂತ್ರ್ಯ ಹಾಗೂ ನ್ಯಾಯದ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಕಸಿಯುವಂತೆ ಮಾಡುತ್ತದೆ. ಆದ್ದರಿಂದ, ಈ ಮಸೂದೆ ಕಾನೂನಾಗುವುದನ್ನು ತಡೆಯಬೇಕು. ಎನ್‌ಡಿಎಗೆ ಬಹುಮತ ವಿಲ್ಲದ ಕಾರಣ, ರಾಜ್ಯಸಭೆಯಲ್ಲಿ ಮತದಾನಕ್ಕೆ ಬಂದಾಗ ಎಲ್ಲ ವಿರೋಧ ಪಕ್ಷದ ಸದಸ್ಯರು ಮಸೂದೆಯ ವಿರುದ್ಧ ಮತ ಚಲಾಯಿಸಿದರೆ ಇದು ಸಾಧ್ಯವಿದೆ ಎಂದು ಮುಹಮ್ಮದ್ ಅಲಿ ಜಿನ್ನಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News