ಕಾಂಗ್ರೆಸ್ ನಾಯಕರನ್ನು ನಮ್ಮ ಪೈಕಿ ಯಾರೊಬ್ಬರೂ ಸಂಪರ್ಕಿಸಿಲ್ಲ: ಅತೃಪ್ತ ಶಾಸಕರ ಸ್ಪಷ್ಟನೆ

Update: 2019-07-27 15:01 GMT

ಬೆಂಗಳೂರು, ಜು.27: ನಾವು ರಾಜೀನಾಮೆ ನೀಡಿರುವುದು ಶಾಸಕ ಸ್ಥಾನಕ್ಕೆ ಹೊರತು, ಕಾಂಗ್ರೆಸ್ ಪಕ್ಷಕ್ಕಲ್ಲ. ನಮಗೆ ಆಗಿರುವ ನೋವಿನಿಂದಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ. ನಮ್ಮನ್ನು ಸ್ಪೀಕರ್ ಅನರ್ಹಗೊಳಿಸಿದರೆ, ಕಾನೂನು ಹೋರಾಟ ನಡೆಸುತ್ತೇವೆ ಎಂದು ಖಾಸಗಿ ಸುದ್ದಿ ವಾಹಿನಿಗೆ ಮುಂಬೈನಲ್ಲಿರುವ ಕಾಂಗ್ರೆಸ್ ಅತೃಪ್ತ ಶಾಸಕರು ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಯಾವ ಕಾಂಗ್ರೆಸ್ ನಾಯಕರನ್ನು ಸಂಪರ್ಕಿಸುವ ಕೆಲಸವನ್ನು ಇಲ್ಲಿರುವ ನಮ್ಮ ಪೈಕಿ ಯಾರೊಬ್ಬರೂ ಮಾಡಿಲ್ಲ. ಅನಗತ್ಯವಾಗಿ ಗೊಂದಲ ಸೃಷ್ಟಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಅತೃಪ್ತ ಶಾಸಕರು ಆರೋಪಿಸಿದ್ದಾರೆ.

ಹಿರೇಕೆರೂರು ಕ್ಷೇತ್ರದ ಶಾಸಕ ಬಿ.ಸಿ.ಪಾಟೀಲ್ ಮಾತನಾಡಿ, ನಾವು ಯಾರನ್ನೂ ಸಂಪರ್ಕಿಸಿಲ್ಲ. ಸಿದ್ದರಾಮಯ್ಯರನ್ನು ನಾವು ಕರೆ ಮಾಡುವ ಪ್ರಯತ್ನ ಮಾಡಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನಾವು ಯಾವ ಕಾರಣಕ್ಕಾಗಿ ಅವರನ್ನು ಸಂಪರ್ಕಿಸಬೇಕು. ಯಾವುದೇ ಕಾರಣಕ್ಕೂ ನಾವು ರಾಜೀನಾಮೆ ಹಿಂಪಡೆಯುವುದಿಲ್ಲ ಎಂದರು.

ನನಗೆ ಅನ್ಯಾಯವಾಗಿದ್ದಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಅಲ್ಲಿ ಭಯ ಬೀಳಿಸುವಂತಹ ವಾತಾವರಣ ಸೃಷ್ಟಿಯಾಗಿತ್ತು. ಸುಳ್ಳು ಕಥೆಗಳನ್ನು ಕಟ್ಟಿ ನಮ್ಮ ಒಗ್ಗಟ್ಟು ಮುರಿಯಲು ಯತ್ನಿಸಲಾಗುತ್ತಿದೆ. ನಾವೆಲ್ಲ ಒಗ್ಗಟ್ಟಾಗಿ ಇರಬೇಕೆಂದು ಇಲ್ಲಿಗೆ ಬಂದಿದ್ದೇವೆ. ಶಾಸಕರನ್ನು ಅನರ್ಹಗೊಳಿಸುವಂತೆ ಸುಪ್ರೀಂಕೋರ್ಟ್ ಹೇಳಿರಲಿಲ್ಲ. ಸ್ಪೀಕರ್ ಮೂವರು ಶಾಸಕರನ್ನು ಅನರ್ಹಗೊಳಿಸಿ ನೀಡಿರುವ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಹೋಗುತ್ತೇವೆ ಎಂದು ಅವರು ಹೇಳಿದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸದನಕ್ಕೆ ಹೋಗುವ ಅಗತ್ಯವಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೆಲ್ಲ ಕೆಲವರು ಸಚಿವರಾಗುತ್ತಿದ್ದಾರೆ. ಅವರು ಸರಿಯಾಗಿದ್ದರೆ ಈ ಸ್ಥಿತಿ ಉದ್ಭವವಾಗುತ್ತಲೇ ಇರಲಿಲ್ಲ. ಉಪ ಚುನಾವಣೆ ಬಂದರೆ ಕ್ಷೇತ್ರದ ಜನತೆ ನಿರ್ಧರಿಸುತ್ತಾರೆ ಎಂದು ಬಿ.ಸಿ.ಪಾಟೀಲ್ ತಿಳಿಸಿದರು.

ಹೊಸಕೋಟೆ ಕ್ಷೇತ್ರದ ಶಾಸಕ ಎಂಟಿಬಿ ನಾಗರಾಜ್ ಮಾತನಾಡಿ, ನಾವು ಯಾರಿಗೂ ಫೋನ್ ಮಾಡಿಲ್ಲ. ಹೆದರಿಸಿ, ಬೆದರಿಸಲು ಸಿದ್ದರಾಮಯ್ಯ ಈ ರೀತಿ ಹೇಳಿದ್ದಾರೆ. ನಮ್ಮನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವ ಬೆದರಿಕೆ ಹಾಕಲಾಗುತ್ತಿದೆ. ನಮ್ಮನ್ನು ಅನರ್ಹ ಮಾಡಿದರೆ ನ್ಯಾಯಾಲಯಕ್ಕೆ ಹೋಗುತ್ತೇವೆ ಎಂದರು.

ನನ್ನ ರಾಜೀನಾಮೆ ಬಗ್ಗೆ ಸಿದ್ದರಾಮಯ್ಯಗೆ ಮೊದಲೇ ಹೇಳಿದ್ದೆ, ಸಮ್ಮಿಶ್ರ ಸರಕಾರದಲ್ಲಿನ ಸಮಸ್ಯೆಯ ಬಗ್ಗೆಯೂ ನಾನು ಹೇಳಿದ್ದೆ, ಯಾವುದೇ ಕೆಲಸವಾಗುತ್ತಿಲ್ಲವೆಂದು ಸಹ ನಾನು ಹೇಳಿದ್ದೆ. ಆದರೆ, ಇದ್ಯಾವುದಕ್ಕೂ ಸಿದ್ದರಾಮಯ್ಯ ತಲೆ ಕೆಡಿಸಿಕೊಳ್ಳಲಿಲ್ಲ. ನಮಗೆ ಮಂತ್ರಿ ಸ್ಥಾನ ಬೇಕೆಂದು ನಾವು ಯಾರನ್ನು ಕೇಳಿಲ್ಲ. 15 ಶಾಸಕರು ಒಟ್ಟಾಗಿದ್ದೇವೆ ಎಂದು ನಾಗರಾಜ್ ಹೇಳಿದರು.

ಮಸ್ಕಿ ವಿಧಾನಸಭಾ ಕ್ಷೇತ್ರದ ಶಾಸಕ ಪ್ರತಾಪ್ ಗೌಡ ಪಾಟೀಲ್ ಮಾತನಾಡಿ, ನಾವು ಯಾರು ಸಿದ್ದರಾಮಯ್ಯಗೆ ಕರೆ ಮಾಡಿಲ್ಲ. ಅವರು ಸುಳ್ಳು ಹೇಳಿಕೆ ಕೊಟ್ಟಿದ್ದಾರೆ. ಸೋಮವಾರದ ವಿಧಾನಸಭೆ ಕಲಾಪಕ್ಕೆ ನಾವು ಹಾಜರಾಗಲ್ಲ. ಸಿದ್ದರಾಮಯ್ಯ ಏನೆ ಮಾಡಿದರೂ ನಾವು ವಾಪಸ್ ಬರುವುದಿಲ್ಲ. ಯಾವುದೇ ಕಾರಣಕ್ಕೂ ನಾವು ರಾಜೀನಾಮೆ ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜರಾಜೇಶ್ವರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಮುನಿರತ್ನ ಮಾತನಾಡಿ, ಬೆಂಗಳೂರು ಬಿಟ್ಟು ಬರುವ ಮುನ್ನ ನಾನು ಸಿದ್ದರಾಮಯ್ಯ ಜೊತೆ ಮಾತನಾಡಿದ್ದೇನೆ. ಬೆಂಗಳೂರಿನಿಂದ ಬಂದ ನಂತರ ನಾನು ಯಾರನ್ನೂ ಸಂಪರ್ಕಿಸುವ ಪ್ರಯತ್ನ ಮಾಡಿಲ್ಲ ಎಂದರು.

ನನ್ನ ಜೊತೆ ನಾಯಕರು ಮಾತನಾಡಿದಾಗ ಸಮಯ ಮೀರಿತ್ತು. ನನ್ನ ಕ್ಷೇತ್ರಕ್ಕೆ ಆಗಬೇಕಾದ ಪ್ರಮುಖ ಕೆಲಸಗಳು ಆಗಿಲ್ಲ. ಹಾಗಾಗಿ, ಮನಸ್ತಾಪದಿಂದ ನಾವೆಲ್ಲ ಇಲ್ಲಿಗೆ ಬಂದಿದ್ದೇವೆ. ನಾವು ಬೇರೆ ಪಕ್ಷಕ್ಕೆ ಹೋಗುತ್ತೇವೆ ಎಂದು ಎಲ್ಲೂ ಹೇಳಿಲ್ಲ. ನಾವು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟಿಲ್ಲ. ಸಿನಿಮಾದ ಕೆಲಸ ಇರುವುದರಿಂದ ಸೋಮವಾರ ಸದನಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ಮುನಿರತ್ನ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News