ಓ ಮೆಣಸೇ…!

Update: 2019-07-29 03:22 GMT

ಸಂಸಾರವೆಂಬುದು ಬೀಸುವ ಕಲ್ಲಿನಂತೆ - ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ

- ಸನ್ಯಾಸಿಗಳು ಸಂಸಾರದೊಳಗೆ ಕೈ ಹಾಕಿದರೆ ಜನರು ಕಲ್ಲು ಬೀಸುವುದುಂಟು. 

---------------------

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ನಿಗೂಢ - ಮಮತಾ ಬ್ಯಾನರ್ಜಿ, ಪ.ಬ.ಮುಖ್ಯಮಂತ್ರಿ

- ಪ.ಬಂಗಾಳದ ಕಮ್ಯುನಿಸ್ಟರು ಮುಸಿಮುಸಿ ನಕ್ಕರಂತೆ. 

---------------------

ಕತ್ತಲೆ ಕವಿದ ಮನಸ್ಸನ್ನು ಬೆಳಕಿನೆಡೆಗೆ ಕೊಂಡೊಯ್ಯುವ ಮಹತ್ತರ ಜವಾಬ್ದಾರಿ ಗುರುವಿಗಿದೆ - ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ಮುಖಂಡ

-ಕತ್ತಲೆ ಕಳೆಯಬೇಕಾದರೆ ಕೆಲವು ಜವಾಬ್ದಾರಿಗಳನ್ನು ಪೊಲೀಸ್ ಇಲಾಖೆಗಳು ನಿರ್ವಹಿಸುವ ಅಗತ್ಯವೂ ಇದೆ. 

---------------------

ದೇಶದಲ್ಲಿ ಭಾರೀ ಶ್ರೀಮಂತರ ಸಂಖ್ಯೆ ಬಹಳವೇನೂ ಇಲ್ಲ - ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ

-ಭಾರೀ ಬಡವರ ಸಂಖ್ಯೆ ಹೆಚ್ಚಿದೆ ಎನ್ನುವುದೇ ನಮ್ಮ ಹೆಮ್ಮೆ. 

---------------------

ಕಾಶ್ಮೀರಕ್ಕೆ ಸಂಬಂಧಿಸಿ ಭಾರತ-ಪಾಕ್ ನಡುವೆ ಮಧ್ಯಸ್ಥಿಕೆಗೆ ಸಿದ್ಧ - ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ

-ಮೊದಲು ಪಾಕ್ ಮತ್ತು ತಾಲಿಬಾನ್ ನಡುವಿನ ನಿಮ್ಮ ಮಧ್ಯಸ್ಥಿಕೆ ಯಶಸ್ವಿಯಾಗಿ ಮುಗಿಯಲಿ.

---------------------

ಚಂದ್ರಯಾನ- 2ರಿಂದಾಗಿ ಚಂದ್ರನ ಮೇಲ್ಮೈನಲ್ಲಿರುವ ಹೊಸ ವಿಷಯಗಳು ಹೊರಬರಲಿವೆ ಎಂಬ ವಿಶ್ವಾಸವಿದೆ - ರಾಮನಾಥ್ ಕೋವಿಂದ್, ರಾಷ್ಟ್ರಪತಿ

-ಭೂಮಿಯ ಮೇಲ್ಮೈನಲ್ಲಿರುವ ಹಳೆ ಸಮಸ್ಯೆಗಳ ಪರಿಹಾರ ಯಾವಾಗ?

---------------------

ನನ್ನ ತಂದೆಯ ಇಚ್ಛೆಗೆ ವಿರುದ್ಧವಾಗಿ ಹೋಗಿ ಕೆಲವು ತಪ್ಪುಗಳನ್ನು ಮಾಡಿದ್ದರೂ ಒಂದಷ್ಟು ಒಳ್ಳೆಯ ಕೆಲಸ ಮಾಡಿದ ತೃಪ್ತಿ ಇದೆ

- ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

-ಇಂತಹ ತಪ್ಪುಗಳನ್ನು ಇನ್ನಷ್ಟು ಮಾಡಲಿ ಎಂದು ದೇವೇಗೌಡರು ಒಳಗೊಳಗೆ ಹಂಬಲಿಸುತ್ತಿದ್ದಾರಂತೆ.

---------------------

ಸಹೋದ್ಯೋಗಿಗಳೇ ನನ್ನ ಬೆನ್ನಿಗೆ ಚೂರಿ ಹಾಕಿದ್ದಾರೆ - ಡಿ.ಕೆ. ಶಿವಕುಮಾರ್, ಮಾಜಿ ಸಚಿವ

-ಹಿಂದೆ ಸಿದ್ದರಾಮಯ್ಯ ಅವರಿಗೆ ಹಾಕಿದ್ದ ಚೂರಿಯನ್ನೇ ತೆಗೆದು ನಿಮಗೆ ಹಾಕಿರುವ ಸಾಧ್ಯತೆ ಇದೆ. 

---------------------

ದೇಶದಲ್ಲಿ ವಿಧ್ವಂಸಕ ಕೃತ್ಯಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ - ಕಿಶನ್‌ರೆಡ್ಡಿ, ಕೇಂದ್ರ ಸಚಿವ

-ಯಾವ ದೇಶದಲ್ಲಿ?

---------------------

ಸರಕಾರದ ಪತನಕ್ಕಿಂತ ಕುದುರೆ ವ್ಯಾಪಾರ ನೋವು ತಂದಿದೆ - ದೇವೇಗೌಡ, ಮಾಜಿ ಪ್ರಧಾನಿ

-ನೋವು ಬೇಡ, ನಡೆದಿರುವುದು ಕತ್ತೆ ವ್ಯಾಪಾರ. 

---------------------

ದೋಸ್ತಿ ಸರಕಾರದ ಸೋಲು ಪ್ರಜಾತಂತ್ರದ ಗೆಲುವು - ಯಡಿಯೂರಪ್ಪ, ಮುಖ್ಯಮಂತ್ರಿ

-ಒಟ್ಟಿನಲ್ಲಿ ತಂತ್ರದ ಗೆಲುವು ಅಷ್ಟೇ. 

---------------------

ರಾಕ್ಷಸ ರಾಜಕಾರಣದ ವಿರುದ್ಧ ಸಾತ್ವಿಕ ರಾಜಕಾರಣ ಮಾಡುವ ನಮ್ಮ ಪ್ರಯತ್ನಕ್ಕೆ ಗೆಲುವಾಗಿದೆ - ಎಚ್. ವಿಶ್ವನಾಥ್, ಶಾಸಕ

-ಸಾತ್ವಿಕ ರಾಜಕಾರಣದ ಗೆಲುವು ಎನ್ನುವುದು ಲಿಂಬಾವಳಿಯವರ ಅಂಬೋಣ.

---------------------

ಯಡಿಯೂರಪ್ಪರನ್ನು ಹೇಗೆ ಕಂಟ್ರೋಲ್ ಮಾಡಬೇಕೆಂದು ನನಗೆ ಗೊತ್ತು - ಎಚ್.ಡಿ. ರೇವಣ್ಣ, ಶಾಸಕ

-ಕುಮಾರಸ್ವಾಮಿಯವರನ್ನು ಕಂಟ್ರೋಲ್ ಮಾಡುವುದಕ್ಕಿಂತ ಸುಲಭ ಎಂದು ಭಾವಿಸಿ ಸರಕಾರ ಉರುಳಿಸಿರಬೇಕು. 

---------------------

ಜಗತ್ತೇ ಪ್ರಳಯವಾದರೂ ಪಕ್ಷದ್ರೋಹ ಮಾಡಿದ ಶಾಸಕರನ್ನು ಪಕ್ಷಕ್ಕೆ ಮತ್ತೆ ವಾಪಸ್‌ತೆಗೆದುಕೊಳ್ಳುವುದಿಲ್ಲ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

-ನೀವೇ ವಾಪಸ್ ಹೋಗುವ ಸಾಧ್ಯತೆಗಳಿವೆ.

---------------------

ನನ್ನ ಇಷ್ಟು ವರ್ಷದ ರಾಜಕೀಯ ಜೀವನದಲ್ಲಿ ಇದೇ ಪ್ರಥಮ ಬಾರಿಗೆ ಸದನದಲ್ಲಿ ಬಾಯಿ ಮುಚ್ಚಿ ಕುಳಿತಿದ್ದೆ - ಕೆ.ಎಸ್ ಈಶ್ವರಪ್ಪ, ಶಾಸಕ

-ಯಡಿಯೂರಪ್ಪ ಅಧಿಕಾರಾವಧಿಯಲ್ಲಿ ಬಾಯಿ ಬಿಚ್ಚುವುದು ಹೇಗೂ ಇದೆಯಲ್ಲ.

---------------------

ಪಾಕಿಸ್ತಾನದಲ್ಲಿ ಈಗಲೂ 40 ಸಾವಿರ ಉಗ್ರರಿದ್ದಾರೆ - ಇಮ್ರಾನ್ ಖಾನ್, ಪಾಕ್ ಪ್ರಧಾನಿ

-ಶೀಘ್ರದಲ್ಲೇ ನಾವು ಅವರನ್ನು ಮೀರಿಸಲಿದ್ದೇವೆ-ಮೋದಿ ಪ್ರತ್ಯುತ್ತರ

---------------------

ನಮ್ಮ ಶಾಸಕರು ಖರೀದಿಗಿಲ್ಲ - ಕಮಲನಾಥ್, ಮಧ್ಯಪ್ರದೇಶ ಮುಖ್ಯಮಂತ್ರಿ

-ಬೇರೆ ಶಾಸಕರನ್ನು ಖರೀದಿಸಿದವರು ಒಂದಲ್ಲ ಒಂದು ದಿನ ತಮ್ಮ ಶಾಸಕರ ಖರೀದಿಯನ್ನು ಅಸಹಾಯಕರಾಗಿ ನೋಡಬೇಕಾಗುತ್ತದೆ.

---------------------

ಮೈತ್ರಿ ಸರಕಾರ ಪತನ ಗೊಂಡಿದ್ದಕ್ಕೆ ಯಾರೂ ಮತ್ತೆ ಮತ್ತೆ ಶೋಕ ಗೀತೆ ಹಾಡಬಾರದು - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

-ನಿಮ್ಮ ಅಭಿಮಾನಿಗಳು ವಿಜಯಗೀತೆ ಹಾಡುವ ವದಂತಿಗಳಿವೆ.

---------------------

ನಾನು ಬಿಎಸ್ಪಿ ಬಿಡುವ ಪ್ರಶ್ನೆಯೇ ಇಲ್ಲ - ಎನ್. ಮಹೇಶ್, ಶಾಸಕ

-ಮೂರು ಬಿಟ್ಟಮೇಲೆ, ಬಿಎಸ್ಪಿ ಬಿಟ್ಟರೆಷ್ಟು ಉಳಿಸಿಕೊಂಡರೆಷ್ಟು.

---------------------

ಈ ಬಾರಿ ಎಚ್.ಡಿ. ರೇವಣ್ಣ ಅವರ ನಿಂಬೆ ಹಣ್ಣು ಕೆಲಸ ಮಾಡಲಿಲ್ಲ - ಎ.ಮಂಜು, ಮಾಜಿ ಸಚಿವ

-ಸದ್ಯಕ್ಕೆ ಲಿಂಬಾವಳಿಯವರ ಲಿಂಬೆಯದೇ ಸುದ್ದಿ.

---------------------

ಕರ್ನಾಟಕದಲ್ಲಿ ಸಮ್ಮಿಶ್ರ ಸರಕಾರದ ಪತನ ಪ್ರಜಾಪ್ರಭುತ್ವದ ಕರಾಳ ಅಧ್ಯಾಯ - ಮಾಯಾವತಿ, ಬಿಎಸ್ಪಿ ಅಧ್ಯಕ್ಷೆ

-ಆ ಅಧ್ಯಾಯದ ಮೊದಲ ಪುಟದಲ್ಲೇ ನಿಮ್ಮ ಶಾಸಕರೊಬ್ಬರ ಹೆಸರಿದೆ.

---------------------

ವ್ಯಕ್ತಿಯೊಬ್ಬನನ್ನು ಭಯೋತ್ಪಾದಕನೆಂದು ಘೋಷಿಸುವ ಕಾನೂನು ಅಗತ್ಯವಿದೆ - ಅಮಿತ್ ಶಾ, ಕೇಂದ್ರ ಸಚಿವ

-ಅಂತಹ ಘೋಷಣೆಯೊಂದಕ್ಕೆ ಅರ್ಹರಾದ ವ್ಯಕ್ತಿ ಈಗಾಗಲೇ ಸಂಸದನೆಂಬ ಹೆಸರಲ್ಲಿ ಸಂಸದ್ ಪ್ರವೇಶಿಸಿರುವ ಕುರಿತಂತೆ ವದಂತಿಗಳಿವೆ.

---------------------

ಆಮ್ಲಜನಕ ಸೇವಿಸಿ ಆಮ್ಲಜನಕವನ್ನೇ ಹೊರಬಿಡುವ ಏಕೈಕ ಪ್ರಾಣಿ ಹಸು - ತ್ರಿವೇಂದ್ರ ಸಿಂಗ್, ಉತ್ತರಾಖಂಡ ಮುಖ್ಯಮಂತ್ರಿ

-ಆಮ್ಲಜನಕವನ್ನೇ ಹೊರಗೆ ಬಿಡುವುದಾದರೆ, ಅದು ಆಮ್ಲಜನಕವನ್ನು ಸೇವಿಸುವುದಾದರೂ ಯಾಕೆ?

---------------------

ಅಮೆರಿಕ ಪ್ರವಾಸ ಮುಗಿಸಿ ಹಿಂದಿರುಗಿದಾಗ ಕ್ರಿಕೆಟ್‌ನ ವಿಶ್ವಕಪ್ ಗೆದ್ದು ಬಂದಷ್ಟೇ ಖುಷಿಯಾಯಿತು - ಇಮ್ರಾನ್ ಖಾನ್, ಪಾಕ್ ಪ್ರಧಾನಿ

-ನೀವು ಘೋಷಿಸಿದ ಉಗ್ರರ ಸಂಖ್ಯೆ ವಿಶ್ವಕಪ್‌ನಲ್ಲಿ ಸಂಗ್ರಹಿಸಿದ ರನ್‌ಗಳ ಸಂಖ್ಯೆ ಇರಬಹುದೇ?

---------------------

ನಾವು ಅತೃಪ್ತರಲ್ಲ, ಅಸಹಾಯಕರು - ಶಿವರಾಮ ಹೆಬ್ಬಾರ್, ಶಾಸಕ

-ಹಣದ ಪೆಟ್ಟಿಗೆಯ ಮುಂದೆ ಅಸಹಾಯಕರಾಗಿರಬೇಕು, ಪಾಪ!

Writer - ಪಿ.ಎ.ರೈ,

contributor

Editor - ಪಿ.ಎ.ರೈ,

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...