ಚಿತ್ರದುರ್ಗ: ಆಕಸ್ಮಿಕ ಬೆಂಕಿಗೆ 300 ಕುರಿಗಳು ಆಹುತಿ
Update: 2019-08-01 12:37 GMT
ಚಿತ್ರದುರ್ಗ, ಆ.1: ಗುಡ್ಡವೊಂದರಲ್ಲಿ ಸಂಭವಿಸಿದ ಆಕಸ್ಮಿಕ ಬೆಂಕಿಗೆ ಸುಮಾರು 300 ಕುರಿಗಳು ಆಹುತಿಯಾಗಿ, ಸುಮಾರು 700 ಕುರಿಗಳು ಪ್ರಾಣಾಪಾಯದಿಂದ ಪಾರಾದ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹೊರಕೆರೆದೇವಪುರದ ಬಳಿ ನಡೆದಿದೆ.
ಹೊಸದುರ್ಗ ತಾಲೂಕಿನ ಅಮೃತಾಪುರ ಗ್ರಾಮದ ತಿಮ್ಮಪ್ಪ ಒಂದು ಸಾವಿರ ಕುರಿಗಳನ್ನು ಹೊರಕೆರೆದೇವಪುರ ಅರಣ್ಯ ಪ್ರದೇಶದಲ್ಲಿ ಮೇಯಿಸುತ್ತಿದ್ದರು. ಈ ವೇಳೆ ಗುಡ್ಡದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಬೆಟ್ಟದಲ್ಲಿ ಜೋರಾಗಿ ಗಾಳಿ ಬೀಸುತ್ತಿದ್ದರಿಂದ ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿಕೊಂಡ ಪರಿಣಾಮ ಸುಮಾರು 300 ಕುರಿಗಳು ಬೆಂಕಿಗೆ ಆಹುತಿಯಾಗಿವೆ.
ಈ ಕುರಿಗಳ ಸಾವಿನಿಂದಾಗಿ ರೈತ ತಿಮ್ಮಪ್ಪನಿಗೆ ಸುಮಾರು 12ಲಕ್ಷ ರೂ.ಗೂ ಅಧಿಕ ನಷ್ಟವಾಗಿದೆ. ಹೊಳಲ್ಕೆರೆ ಠಾಣೆಯ ಪೊಲೀಸರು ಹಾಗೂ ಪಶು ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಉಣ್ಣೆ ಅಭಿವೃದ್ಧಿ ನಿಗಮದಿಂದ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.