ಎಂಟು ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು, ಆ.2: ರಾಜ್ಯ ಸರಕಾರವು ಎಂಟು ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಶುಕ್ರವಾರ ಆದೇಶ ಹೊರಡಿಸಿದೆ.
ಬೆಂಗಳೂರು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹಾಗೂ ಐಜಿಪಿ ಉಮೇಶ್ ಕುಮಾರ್ ಅವರನ್ನು ಅಗ್ನಿ ಶಾಮಕ ದಳದ ಐಜಿಪಿಯನ್ನಾಗಿ, ಸ್ಥಳ ನಿಯುಕ್ತಿಯ ನಿರೀಕ್ಷೆಯಲ್ಲಿದ್ದ ಹೇಮಂತ್ ನಿಂಬಾಳ್ಕರ್ ಅವರನ್ನು ಹೆಚ್ಚುವರಿ ಪೊಲೀಸ್ ಆಯುಕ್ತ(ಆಡಳಿತ) ಹಾಗೂ ಐಜಿಪಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.
ಸ್ಥಳ ನಿಯುಕ್ತಿಯ ನಿರೀಕ್ಷೆಯಲ್ಲಿದ್ದ ಡಾ.ಬಿ.ಆರ್.ರವಿಕಾಂತೇಗೌಡ ಅವರನ್ನು ಡಿಐಜಿಪಿ ಹಾಗೂ ಬೆಂಗಳೂರು ಪಶ್ಚಿಮ ವಿಭಾಗದ ಜಂಟಿ ಪೊಲೀಸ್ ಆಯುಕ್ತರನ್ನಾಗಿ ಹಾಗೂ ಆರ್.ಚೇತನ್ರನ್ನು ಉಡುಪಿ ಜಿಲ್ಲೆಯ ಕರಾವಳಿ ಭದ್ರತಾ ಪೊಲೀಸ್ ವಿಭಾಗದ ಎಸ್ಪಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.
ಸ್ಥಳ ನಿಯುಕ್ತಿಯ ನಿರೀಕ್ಷೆಯಲ್ಲಿದ್ದ ಡಿ.ದೇವರಾಜ ಅವರನ್ನು ಬೆಂಗಳೂರಿನ ಸಿಐಡಿ ವಿಭಾಗದ ಎಸ್ಪಿ ಹಾಗೂ ಡಾ.ಎಂ.ಅಶ್ಚಿನಿಯವರನ್ನು ಬೆಂಗಳೂರು ನಗರ ಗುಪ್ತಚರ ವಿಭಾಗದ ಡಿಸಿಪಿಯನ್ನಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಎಡಿಜಿಪಿ ಡಾ.ರಾಜ್ವೀರ್ ಪ್ರತಾಪ್ ಶರ್ಮರನ್ನು ಸಂವಹನ, ಲಾಜಿಸ್ಟಿಕ್ ಹಾಗೂ ಆಧುನೀಕರಣ ವಿಭಾಗದ ಎಡಿಜಿಪಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.
ಸಂವಹನ, ಲಾಜಿಸ್ಟಿಕ್ ಹಾಗೂ ಆಧುನೀಕರಣ ವಿಭಾಗದ ಎಡಿಜಿಪಿಯಾಗಿದ್ದ ಮಾಲಿನಿ ಕೃಷ್ಣಮೂರ್ತಿಯನ್ನು ರಾಜ್ಯ ಮಾನವ ಹಕ್ಕುಗಳ ಆಯೋಗದ ಎಡಿಜಿಪಿಯನ್ನಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.