ಕಾಫಿನಾಡಿನಲ್ಲಿ ಮತ್ತೆ ಧಾರಾಕಾರ ಮಳೆ: ಭತ್ತದ ಕೃಷಿಕರ ಮೊಗದಲ್ಲಿ ಮಂದಹಾಸ

Update: 2019-08-03 13:34 GMT

ಚಿಕ್ಕಮಗಳೂರು, ಆ.3: ಕಳೆದ ಕೆಲವು ದಿನಗಳಿಂದ ಬಿಡುವು ನೀಡಿದ್ದ ಮಳೆ ಇದೀಗ ಮಲೆನಾಡಿನಲ್ಲಿ ಮತ್ತೆ ಆರ್ಭಟಿಸಲಾರಂಭಿಸಿದೆ. ಜಿಲ್ಲೆಯ ಮಲೆನಾಡು ಭಾಗದ ತಾಲೂಕುಗಳ ವ್ಯಾಪ್ತಿಯಲ್ಲಿ ಶುಕ್ರವಾರ ಹಾಗೂ ಶನಿವಾರ ಧಾರಾಕಾರ ಮಳೆ ಸುರಿದಿದೆ. ಮಳೆ ಕೈಕೊಟ್ಟಿದ್ದರಿಂದ ನೀರಿಲ್ಲದೇ ಒಣಗುತ್ತಿದ್ದ ಭತ್ತದ ಗದ್ದೆಗಳಲ್ಲಿ ಕೃಷಿ ಚಟುವಟಿಕೆ ಕೆಲ ದಿನಗಳಿಂದ ನೆನೆಗುದಿಗೆ ಬಿದ್ದಿತ್ತು. ಆದರೆ ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಭತ್ತದ ಕೃಷಿಕರಲ್ಲಿ ಮಂದಹಾಸಕ್ಕೆ ಕಾರಣವಾಗಿದೆ.

ಕಳೆದ ಬಾರಿ ಈ ಹೊತ್ತಿಗಾಗಲೇ ಕಾಫಿನಾಡಿನಲ್ಲಿ ಭಾರೀ ಮಳೆಯಿಂದಾಗಿ ಸಾಕಷ್ಟು ಜೀವ ಹಾನಿ ಸಂಭವಿಸಿದ್ದಲ್ಲದೇ ಸಾರ್ವಜನಿಕರ ಆಸ್ತಿಪಾಸ್ತಿಗೂ ಬಾರೀ ಹಾನಿಯಾಗಿತ್ತು. ಅತೀವೃಷ್ಟಿಯಿಂದಾಗಿ ಕಾಫಿ, ಅಡಿಕೆ, ಕಾಳು ಮೆಣಸು ಸೇರಿದಂತೆ ವಿವಿಧ ಬೆಳೆಗಳು ಮಳೆಗೆ ಆಹುತಿಯಾಗಿದ್ದವು. ಈ ಬಾರಿಯೂ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಲ್ಲಿ ರೈತರಿದ್ದರು. ಆದರೆ ಆರಂಭದಲ್ಲಿ ಕೊಂಚ ಆರ್ಭಟಿಸಿದ್ದ ಮಳೆ ನಂತರದ ದಿನಗಳಲ್ಲಿ ರೈತರ ನಿರೀಕ್ಷೆಯನ್ನು ಸುಳ್ಳು ಮಾಡಿತ್ತು. ಇದರಿಂದಾಗಿ ಈ ಬಾರಿ ಜಿಲ್ಲೆಯಲ್ಲಿ ವಾಡಿಕೆಯ ಅರ್ಧದಷ್ಟು ಮಳೆಯಾಗದಂತಾಗಿದೆ.

ಜಿಲ್ಲೆಯಾದ್ಯಂತ ವಾಡಿಕೆಯಷ್ಟು ಮಳೆಯಾಗದಿದ್ದರೂ ಜಿಲ್ಲೆಯ ಮಲೆನಾಡು ಭಾಗದ ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಆಗಾಗ್ಗೆ ಸುರಿದ ಧಾರಾಕಾರ ಮಳೆಯಿಂದಾಗಿ ಕಾಫಿ, ಅಡಿಕೆ ತೋಟಗಳ ಕೃಷಿ ಚಟುವಟಿಕೆಗಳು ನಿರಾತಂಕವಾಗಿ ಸಾಗಿದೆ. ಆದರೆ ಈ ತಾಲೂಕುಗಳ ವ್ಯಾಪ್ತಿಯಲ್ಲಿ ಹೆಚ್ಚಿರುವ ಭತ್ತದ ಕೃಷಿಗೆ ಇದುವರೆಗೂ ಸುರಿದ ಮಳೆ ಭತ್ತದ ಕೃಷಿಯ ಹಿನ್ನಡೆಗೆ ಕಾರಣವಾಗಿದೆ. ಮಲೆನಾಡು ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ ರೈತರ ಪಾಲಿಗೆ ಭತ್ತದ ಕೃಷಿಯೇ ಜೀವನಾಧಾರವಾಗಿದೆ. ಆದರೆ ಭತ್ತದ ಕೃಷಿಗೆ ಉತ್ತಮ ಮಳೆಯ ಅಗತ್ಯವಿದೆ. ಆದರೆ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಪರಿಣಾಮ ಭತ್ತದ ಗದ್ದೆಗಳನ್ನು ಹೂಟೆ ಮಾಡಿ ಮಳೆಯ ನಿರೀಕ್ಷೆಯಲ್ಲಿದ್ದ ರೈತರು ಮಳೆಯ ಕಣ್ಣಾಮುಚಾಲೆಯಾಟದಿಂದ ಬೇಸತ್ತು ಹೋಗಿದ್ದರು. ಹೂಟೆ ಮಾಡಿದ್ದ ಗದ್ದೆಗಳು ನೀರಿಲ್ಲದೇ ಭಣಗುಡುತ್ತಿದ್ದವು. ಸಸಿಮಡಿಗಳು ನೀರಿಲ್ಲದೇ ವಿವಿಧ ಕೀಟಬಾಧೆಗಳಿಗೆ ತುತ್ತಾಗಲಾರಂಭಿಸಿದ್ದು, ರೈತರು ತಲೆ ಮೇಲೆ ಕೈಹೊತ್ತು ಕೂರುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇದೀಗ ಕಳೆದ ಎರಡು ದಿನಗಳಿಂದ ಮಲೆನಾಡು ಭಾಗದ ತಾಲೂಕುಗಳ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಜಿಲ್ಲೆಯ ಮೂಡಿಗೆರೆ, ಬಣಕಲ್, ಕೊಟ್ಟಿಗೆಹಾರ, ಬಾಳೆಹೊನ್ನೂರು, ಕಿರುಗುಂದ, ಗೋಣಿಬೀಡು, ಕಳಸ, ಕುದುರೆಮುಖ, ಸಂಸೆ, ಹೊರನಾಡು, ಶೃಂಗೇರಿ, ಜಯಪುರ, ಶೃಂಗೇರಿ, ನೆಮ್ಮಾರ್, ಕಿಗ್ಗಾ, ಮೇಗುಂದ, ನರಸಿಂಹರಾಜಪುರ, ಬಸರಿಕಟ್ಟೆ ಮತ್ತಿತರ ಗ್ರಾಮಗಳ ವ್ಯಾಪ್ತಿಯಲ್ಲಿ ಎರಡು ದಿನಗಳಿಂದ ಉತ್ತಮ ಮಳೆಯಾಗಿದೆ. ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಈ ಭಾಗದ ಭದ್ರಾ ಮತ್ತು ತುಂಗಾ ನದಿಗಳಲ್ಲಿ ನೀರಿನ ಹರಿವು ನಿಧಾನಗತಿಯಲ್ಲಿ ಏರುತ್ತಿದೆ. ಮೂಡಿಗೆರೆ ಭಾಗದಲ್ಲಿ ಕಳೆದ ಎರಡು ದಿನಗಳಲ್ಲಿ ಧಾರಾಕಾರ ಮಳೆಯಾದ ಪರಿಣಾಮ ಹೇಮಾವತಿ ನದಿ ತುಂಬಿ ಹರಿಯುತ್ತಿದೆ.

ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗುತ್ತಿದ್ದರೆ, ಚಿಕ್ಕಮಗಳೂರು ನಗರದ ಹಾಗೂ ಸುತ್ತಮುತ್ತ ಮಳೆ ನಾಪತ್ತೆಯಾಗಿದೆ. ಇನ್ನು ಕಡೂರು, ತರೀಕೆರೆ ಭಾಗದಲ್ಲಿ ಪ್ರತಿದಿನ ಮೋಡ ಕವಿದ ವಾತಾವರಣ ಇದ್ದರೂ ಮಳೆಯ ಸಿಂಚನ ಮಾತ್ರ ಆಗುತ್ತಿಲ್ಲ. ಇದರಿಂದಾಗಿ ಈ ಭಾಗದ ರೈತರ ಕೃಷಿ ಚಟುವಟಿಕೆಗೆ ಭಾರೀ ಹಿನ್ನಡೆಯಾಗಿದೆ. ತರೀಕೆರೆ ತಾಲೂಕು ವ್ಯಾಪ್ತಿಯ ಕೆಲವೆಡೆ ಭತ್ತದ ಕೃಷಿ ಇದ್ದು, ಮಳೆಯ ಕೊರತೆಯಿಂದಾಗಿ ತಾಲೂಕಿನ ಭತ್ತದ ಕೃಷಿಕರು ಸಂಕಷ್ಟದಲ್ಲಿದ್ದಾರೆ. ಮಲೆನಾಡು ಭಾಗದಲ್ಲಿ ಸದ್ಯ ಸುರಿಯುತ್ತಿರುವ ಮಳೆ ನಿರಂತರವಾಗಿ ಸುರಿಯಲಿ ಎಂಬುದು ಈ ಭಾಗದ ಕೃಷಿಕರ ಮನದಿಂಗಿತವಾಗಿದೆ. 

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಶನಿವಾರ ಬೆಳಗ್ಗೆ ಸುರಿದ ಮಳೆಗೆ ಕೊಟ್ಟಿಗೆ ಸಮೀಪದ ಚಾರ್ಮಾಡಿ ಘಾಟ್ ಹೆದ್ದಾರಿಯಲ್ಲಿರುವ ಆಲೆಕಾನ್ ರಸ್ತೆಯಲ್ಲಿ ಗುಡ್ಡ ಕುಸಿದಿದ್ದು, ಆಲೆಕಾನ್ ಸಂಪರ್ಕ ರಸ್ತೆ ಸಂಪೂರ್ಣವಾಗಿ ಬಂದ್ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News