ಮಲೆನಾಡಿನಲ್ಲಿ ಮುಂದುವರೆದ ಮಳೆ: ಬಯಲು ಪ್ರದೇಶದಲ್ಲಿ ಮೋಡ ಕವಿದ ವಾತಾವರಣ

Update: 2019-08-04 12:46 GMT

ಚಿಕ್ಕಮಗಳೂರು, ಆ.4: ಜಿಲ್ಲೆಯ ಮಲೆನಾಡ ಭಾಗದಲ್ಲಿ ಶುಕ್ರವಾರ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯ ಆರ್ಭಟ ರವಿವಾರವು ಮುಂದುವರೆದಿದೆ. ಜಿಲ್ಲೆಯ ಪಶ್ಚಿಮಘಟ್ಟ ಸಾಲಿನಲ್ಲಿ ಬಿಟ್ಟುಬಿಟ್ಟು ಮಳೆಯಾಗುತ್ತಿದ್ದರೂ ಮಳೆಯ ರಭಸ ಹೆಚ್ಚಿದ್ದು, ರವಿವಾರ ಸಂಜೆ ವೇಳೆಯಂತೂ ಮಳೆಯ ಆರ್ಭಟ ಮತ್ತಷ್ಟು ಬಿರುಸುಗೊಂಡಿದೆ. ಮಲೆನಾಡಿನ ಕೆಲವೆಡೆ ಮರ, ವಿದ್ಯುತ್ ಕಂಬಗಳು ಧರೆಗುರುಳಿರುವ ಬಗ್ಗೆ ವರದಿಯಾಗಿದೆ. 

ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಾಳೂರು, ಗುತ್ತಿ, ಬೆಟ್ಟಗೆರೆ, ಚಾರ್ಮಾಡಿಘಾಟ್, ನಿಡುವಾಳೆ, ಕಳಸ, ಹೊರನಾಡು, ಜಾವಳಿ, ಹಿರೇಬೈಲು ಮತ್ತಿತರ ಗ್ರಾಮಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಹೇಮಾವತಿ ನದಿ ಸೇರಿದಂತೆ ಸಣ್ಣಪುಟ್ಟ ಹಳ್ಳಕೊಳ್ಳಗಳು ತುಂಬಿ ಹರಿಯಲಾರಂಭಿಸಿವೆ. ಅದೇ ರೀತಿ ಶೃಂಗೇರಿ ತಾಲೂಕಿನ ಕಿಗ್ಗಾ 50.2, ಕೆರೆಕಟ್ಟೆ 47.4, ಶೃಂಗೇರಿಯಲ್ಲಿ 31.8 ಮಿ.ಮೀ. ಮಳೆಯಾಗಿದ್ದು, ರವಿವಾರವು ಶೃಂಗೇರಿಯ ಸುತ್ತಮುತ್ತ ಮಳೆಯಾಗಿದೆ. 

ಕೊಪ್ಪ ತಾಲೂಕಿನ ಜಯಪುರ, ಬಸರೀಕಟ್ಟೆ, ಹೇರೂರು, ಅಗಳಗಂಡಿ, ಮೇಗೂರು, ಲೋಕನಾಥಪುರ ಹಾಗೂ ಜಯಪುರ ಸುತ್ತಮುತ್ತ ಸಾಧಾರಣ ಮಳೆಯಾಗಿದೆ. ಕೊಪ್ಪ ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲೂ ಮಳೆ ಬಿರುಸು ಪಡೆದುಕೊಂಡಿದೆ. ನರಸಿಂಹ ರಾಜಪುರ ತಾಲೂಕಿನಲ್ಲೂ ಭಾರೀ ಮಳೆಯಾಗುತ್ತಿದ್ದು, ಎನ್.ಆರ್.ಪುರ ಪಟ್ಟಣ ಹಾಗೂ ಬಾಳೆಹೊನ್ನೂರು, ಮಾಗುಂಡಿ ಗ್ರಾಮಗಳ ವ್ಯಾಪ್ತಿಯಲ್ಲಿ ಮಳೆ ತೀವ್ರಗೊಂಡಿದೆ.

ಮಲೆನಾಡು ಭಾಗದ ಕುದುರೆಮುಖ, ಕೆರೆಕಟ್ಟೆ, ಬಾಳೆಹೊನ್ನೂರು, ಬೈರಾಪುರ, ಕಳಸ, ದಾರದಹಳ್ಳಿ, ಕೊಟ್ಟಿಗೆಹಾರ, ಬಣಕಲ್, ಚಾರ್ಮಾಡಿ ಘಾಟಿಯ ಸುತ್ತಮುತ್ತಲ ಪ್ರದೇಶಗಳಲ್ಲೂ ನಿರಂತರ ಮಳೆಯಾಗುತ್ತಿದ್ದು, ಚಾರ್ಮಾಡಿ ಘಾಟಿಯಲ್ಲಿ ಮಂಜು ಮುಸುಕಿದ ವಾತವರಣ ನಿರ್ಮಾಣವಾಗಿದೆ. ಇದರಿಂದಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೂ ತೊಂದರೆಯಾಗಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಶುಕ್ರವಾರ ಸಂಜೆಯಿಂದ ಆಗಾಗ ಧಾರಾಕಾರ ಮಳೆಯಾಗುತ್ತಿದ್ದು, ಮಲೆನಾಡು ಭಾಗದಲ್ಲಿ ಹರಿಯುವ ತುಂಗಾ, ಭದ್ರಾ, ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ನದಿಗಳ ನೀರಿನ ಹರಿವಿನಲ್ಲಿ ಏರಿಕೆಯಾಗಿದೆ. 

ಮಲೆನಾಡಿನ ತಾಲೂಕುಗಳ ವ್ಯಾಪ್ತಿಯಲ್ಲಿ ಬಿಟ್ಟು ಬಿಟ್ಟು ಮಳೆಯಾಗುತ್ತಿರುವುದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಕಳೆದ ಕೆಲವು ದಿನಗಳಿಂದ ಬಿಡುವು ನೀಡಿದ್ದ ಮಳೆ ಇದೀಗ ಮಲೆನಾಡಿನಲ್ಲಿ ಮತ್ತೆ ಆರ್ಭಟಿಸುತ್ತಿದ್ದು, ಭತ್ತದ ಕೃಷಿಕರಲ್ಲಿ ಮಂದಹಾಸಕ್ಕೆ ಕಾರಣವಾಗಿದೆ. ಕಳೆದ ಕೆಲ ದಿನಗಳ ಹಿಂದೆ ಮಲೆನಾಡು ಭಾಗದಲ್ಲಿ ಆದ ಮಳೆಯಿಂದ ಅಡಿಕೆ, ಕಾಫಿ, ಕಾಳುಮೆಣಸು ಕೃಷಿ ಚಟುವಟಿಕೆಗಳು ನಿರಾತಂಕವಾಗಿ ಸಾಗಿದೆ. ಆದರೆ ಈ ತಾಲೂಕುಗಳ ವ್ಯಾಪ್ತಿಯಲ್ಲಿ ಹೆಚ್ಚಿರುವ ಭತ್ತದ ಕೃಷಿಗೆ ಇದುವರೆಗೂ ಸುರಿದ ಮಳೆ ಅಲ್ಪ ಪ್ರಮಾಣದ ಮಳೆಯಿಂದಾಗಿ ಹಿನ್ನಡೆಯಾಗಿತ್ತು. ಮಲೆನಾಡು ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ ರೈತರ ಪಾಲಿಗೆ ಭತ್ತದ ಕೃಷಿಯೇ ಜೀವನಾಧಾರವಾಗಿದೆ. ಆದರೆ ಭತ್ತದ ಕೃಷಿಗೆ ಉತ್ತಮ ಮಳೆಯ ಅಗತ್ಯವಿದೆ. ಆದರೆ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಪರಿಣಾಮ ಭತ್ತದ ಗದ್ದೆಗಳನ್ನು ಹೂಟೆ ಮಾಡಿ ಮಳೆಯ ನಿರೀಕ್ಷೆಯಲ್ಲಿದ್ದ ರೈತರು ಮಳೆಯ ಕಣ್ಣಾಮುಚಾಲೆಯಾಟದಿಂದ ಬೇಸತ್ತು ಹೋಗಿದ್ದರು. ಹೂಟೆ ಮಾಡಿದ್ದ ಗದ್ದೆಗಳು ನೀರಿಲ್ಲದೇ ಭಣಗುಡುತ್ತಿದ್ದವು. ಸಸಿಮಡಿಗಳು ನೀರಿಲ್ಲದೇ ವಿವಿಧ ಕೀಟಬಾಧೆಗಳಿಗೆ ತುತ್ತಾಗಲಾರಂಭಿಸಿದ್ದು, ರೈತರ ಸ್ಥಿತಿ ಚಿಂತಾಜನಕವಾಗಿತ್ತು. ಇದೀಗ ಕಳೆದ ಎರಡು ದಿನಗಳಿಂದ ಮಲೆನಾಡು ಭಾಗದ ತಾಲೂಕುಗಳ ವ್ಯಾಪ್ತಿಯಲ್ಲಿ ಎರಡು ದಿನಗಳಿಂದ ಉತ್ತಮ ಮಳೆಯಾಗಿದೆ. 

ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗುತ್ತಿದ್ದರೆ, ಚಿಕ್ಕಮಗಳೂರು ನಗರದ ಹಾಗೂ ಸುತ್ತಮುತ್ತಲ ಆಗಾಗ್ಗೆ ತುಂತುರು ಮಳೆಯಾಗುತ್ತಿದ್ದು, ಬಿಸಿಲು ಮೋಡಗಳ ಕಣ್ಣಾಮುಚ್ಚಾಲೆ ಆಟ ಮುಂದುವರಿದಿದೆ. ಕಡೂರು, ತರೀಕೆರೆ ತಾಲೂಕಿನಲ್ಲಿ ಮೋಡ ಮುಸುಕಿದ ವಾತವರಣವಿದ್ದು, ತಿಂಗಳ ಹಿಂದೆ ಒಂದೆರೆಡು ಬಾರಿ ಉತ್ತಮ ಮಳೆಯಾಗಿದ್ದನ್ನು ಹೊರತು ಪಡಿಸಿ ಸದ್ಯ ಮಳೆ ಕಣ್ಮರೆಯಾಗಿದೆ. ಇದರಿಂದಾಗಿ ಈ ಭಾಗದ ರೈತರ ಕೃಷಿ ಚಟುವಟಿಕೆಗೆ ಭಾರೀ ಹಿನ್ನಡೆಯಾಗಿದೆ.

ಬೆಳೆಗಾರರಲ್ಲಿ ಆತಂಕ, ಭತ್ತದ ಕೃಷಿಕರಲ್ಲಿ ರೈತರಲ್ಲಿ ಹರ್ಷ
ಮಲೆನಾಡು ಭಾಗದಲ್ಲಿ ಶುಕ್ರವಾರ ಸಂಜೆಯಿಂದ ಸತತ ಮಳೆಯಾಗುತ್ತಿರುವುದರಿಂದ ಕಾಫಿ ಬೆಳೆಗೆ ಬೋರಾರ್ ಗೋಗ ತಗಲುವ ಭೀತಿ ಕಾಫಿ ಬೆಳೆಗಾರರನ್ನು ಆತಂಕಕ್ಕೆ ಎಡೆಮಾಡಿದೆ. ಅದೇ ರೀತಿ ಭತ್ತ ಬೆಳೆ ಬೆಳೆಯಲು ಭೂಮಿ ಹಸನು ಮಾಡಿಕೊಂಡು ಸಸಿಮಡಿ ಮಾಡಿರುವ ರೈತರಲ್ಲಿ ಸತತ ಮಳೆಯಾಗುತ್ತಿರುವುದರಿಂದ ಹರ್ಷ ಉಂಟು ಮಾಡಿದ್ದು, ಭತ್ತದ ನಾಟಿ ಕೆಲಸ ಬಿರುಸುಗೊಂಡಿದೆ. ಮಲೆನಾಡು ಭಾಗದಲ್ಲಿ ಎಡಬಿಡದೆ ಗಾಳಿಯೊಂದಿಗೆ ಮಳೆಯಾಗುತ್ತಿದ್ದು, ಮೂಡಿಗೆರೆ ತಾಲೂಕಿನ ಕಿರುಗುಂದ, ಜನ್ನಾಪುರ ಹಾಗೂ ಕಣಚೂರು ಗ್ರಾಮಗಳ ವ್ಯಾಪ್ತಿಯಲ್ಲಿ ಸುಮಾರು 10 ವಿದ್ಯುತ್ ಕಂಬಗಳು ಹಾಗೂ ಮರಗಳು ಧರೆಗುರುಳಿವೆ. ಇದರಿಂದಾಗಿ ಈ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಮೆಸ್ಕಾಂ ಸಿಬ್ಬಂದಿ ಭಾರೀ ಮಳೆಯ ನಡುವೆಯೇ ವಿದ್ಯುತ್ ಸಂಪರ್ಕ ನೀಡಲು ಹರಸಾಹಸ ಪಡುತ್ತಿದ್ದಾರೆಂದು ತಿಳಿದು ಬಂದಿದೆ. ಸಂಜೆಯೊಳಗೆ ವಿದ್ಯುತ್ ಸಂಪರ್ಕ ನೀಡುವ ಭರವಸೆಯನ್ನೂ ಮೂಡಿಗೆರೆ ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News