ಟಿಪ್ಪು ಜಯಂತಿಗೆ ಕಡಿವಾಣ ಬೇಡ: ಪ್ರಗತಿಪರ ಸಂಘಟನೆಗಳ ಆಗ್ರಹ
ಬೆಂಗಳೂರು, ಆ.5: ಸ್ವಾತಂತ್ರ ಹೋರಾಟಗಾರ ಟಿಪ್ಪುಸುಲ್ತಾನ್ ಸರಕಾರಿ ವಾರ್ಷಿಕ ಜಯಂತಿಗೆ ಕಡಿವಾಣ ಹಾಕಲು ಹೊರಟಿರುವ ಕ್ರಮವನ್ನು ಸಿಎಂ ಯಡಿಯೂರಪ್ಪ ವಾಪಸ್ಸು ಪಡೆದು ಮಾಮೂಲಿನಂತೆ ಜನ್ಮೋತ್ಸವವನ್ನು ಆಚರಿಸಬೇಕೆಂದು ಪ್ರಗತಿಪರ ಸಂಘಟನೆಗಳು ಆಗ್ರಹಿಸಿವೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಜ್ರತ್ ಟಿಪ್ಪಸುಲ್ತಾನ್ ಸಂಯುಕ್ತರಂಗದ ಅಧ್ಯಕ್ಷ ಪ್ರೊ.ಎನ್.ವಿ.ನರಸಿಂಹಯ್ಯ, ಈ ಹಿಂದೆ ಯಡಿಯೂರಪ್ಪನವರ ಬಿಜೆಪಿ ಸರಕಾರದ ಅನೇಕ ಮಂತ್ರಿಗಳು, ಸುಲ್ತಾನರ ಅನೇಕ ಜಯಂತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅವರ ಅಪಾರವಾದ ದೇಶಭಕ್ತಿಯನ್ನು ಹಾಡಿ ಹೊಗಳಿರುವ ಅನೇಕ ಉದಾಹರಣೆಗಳಿವೆ. ಹೀಗಿರುವಾಗ ಏಕೆ ಜಯಂತಿಯನ್ನು ರದ್ದು ಪಡಿಸಿದ್ದಾರೆ ಎಂದು ಪ್ರಶ್ನಿಸಿದರು.
ಬಿಜೆಪಿಯ ಮಾಜಿ ವಕ್ಫ್ ಸಚಿವ ಪ್ರೊ.ಮುಮ್ತಾಜ್ ಅಲೀಖಾನ್ ಟಿಪ್ಪು ಸುಲ್ತಾನ್ ಮೇಲೆ ಒಂದು ಕೃತಿ ರಚಿಸಿದ್ದಾರೆ. ಇದೇ ಯುಡಿಯೂರಪ್ಪನವರು ಟಿಪ್ಪು ಬಗ್ಗೆ ಅಪಾರವಾದ ಶ್ರದ್ಧೆ ಮತ್ತು ಅನಿಸಿಕೆ ನುಡಿಗಳನ್ನು ಪುಸ್ತಕದಲ್ಲಿ ದಾಖಲಿಸಿರುವುದು ಇತಿಹಾಸ. ಈಗಲೂ ಅದೇ ರೀತಿಯ ಸಾಂಪ್ರದಾಯಿಕ ಸೌಹಾರ್ದಯುತ ಸ್ಥಿರ ಸರಕಾರವನ್ನು ಸಿಎಂ ನೀಡಬೇಕೆಂದು ಮನವಿ ಮಾಡಿದರು.
ಆರೆಸ್ಸೆಸ್ ಹಾಗೂ ಬ್ರಿಟಿಷರ ನಡುಗುವ ಎದೆಯಲ್ಲಿ ಮೈಸೂರು ಹುಲಿ ಟಿಪ್ಪುವಿನ ಭಯ ಸದಾಕಾಲ ಇದ್ದೇ ಇದೆ. ಯಾವ ಸರಕಾರ ಅಧಿಕಾರಕ್ಕೆ ಬರಲಿ ಅಥವಾ ಯಡಿಯೂರಪ್ಪನವರೇ ಅಧಿಕಾರದಲ್ಲಿ ಮುಂದುವರೆಯಲಿ ಟಿಪ್ಪುವಿನ ಜನ್ಮದಿನ ಅಥವಾ ಅವರ ಅಪಾರ ದೇಶಭಕ್ತಿ, ಅವರ ಕಾರ್ಯಸಾಧನೆಗಳು, ತ್ಯಾಗ ಬಲಿದಾನಕ್ಕೆ ಯಾರೂ ಪ್ರಮಾಣಪತ್ರ ನೀಡಬೇಕಿಲ್ಲ. ಟಿಪ್ಪುವಿನ ಚರಿತ್ರೆ ನಮ್ಮ ಮುಂದೆ ಉಜ್ವಲ ಭವಿಷ್ಯದಂತಿದೆ. ನವಪೀಳಿಗೆಗೆ ಶಕ್ತಿ ಸಾಮರ್ಥ್ಯ ಮತ್ತು ಅನ್ಯಾಯದ ವಿರುದ್ಧ ಹೋರಾಡಲು ಅದು ದಾರಿದೀಪ ಎಂದು ಹೇಳಿದರು.
ಅಂತರ್ರಾಷ್ಟ್ರೀಯ ಖ್ಯಾತಿ ಪಡೆದಿರುವ ಸ್ವಾತಂತ್ರ ಹೋರಾಟಗಾರ ಟಿಪ್ಪು ಸುಲ್ತಾನ್ರ ವಿರೋಧಿ ಚಟುವಟಿಕೆ ನಡೆಸುತ್ತಿರುವುದು, ಸಂಚು ಹೂಡುತ್ತಿರುವುದನ್ನು ನಿಲ್ಲಿಸಿ ವಿವಿಧ ಧರ್ಮದ ಸ್ವಾತಂತ್ರ ಹೋರಾಟಗಾರರಿಗೆ ಸಲ್ಲಿಸಿರುವ ಗೌರವಾರ್ಪಣೆಯನ್ನು ಟಿಪ್ಪು ಸುಲ್ತಾನರಿಗೂ ಸಲ್ಲಿಸಬೇಕು.
-ಪ್ರಗತಿಪರ ಒಕ್ಕೂಟ