ಶೃಂಗೇರಿ: ಮಳೆ-ಗಾಳಿಯ ಅಬ್ಬರ; ಉಕ್ಕಿ ಹರಿದ ತುಂಗೆ

Update: 2019-08-07 17:47 GMT

ಶೃಂಗೇರಿ, ಆ.7: ಮಂಗಳವಾರ ರಾತ್ರಿಯಿಂದ ಪ್ರ್ರಾರಂಭಗೊಂಡ ಆಶ್ಲೇಷಮಳೆ ಬುಧವಾರ ಕೂಡಾ ಮುಂದುವರಿದಿದೆ. ಗುರುವಾರ ಕೂಡಾ ಶಾಲಾ-ಕಾಲೇಜುಗಳಿಗೆ ರಜೆ ಪೋಷಿಸಲಾಗಿದೆ. ಶೃಂಗೇರಿಯ ಜೀವನಾಡಿ ತುಂಗೆ ಉಕ್ಕಿ ಹರಿಯುತ್ತಿದ್ದು, ನರಸಿಂಹವನದ ಸಮೀಪವಿರುವ ಸ್ನಾನಘಟ್ಟ ಮುಕ್ಕಾಲುಭಾಗ ಮುಳುಗಡೆಯಾಗಿದೆ. ಸಂಜೆ ಹೊತ್ತಿಗೆ ಶ್ರೀಮಠದ ಭೋಜನ ಮಂದಿರದ ಕೆಳಗಡೆಯ ಊಟದ ಹಾಲ್‍ಗೆ ನೀರು ನುಗ್ಗಿದ್ದು, ಗಾಂಧಿ ಮೈದಾನದ ರಸ್ತೆ ಸಂಪೂರ್ಣ ಜಲಾವೃತ್ತಗೊಂಡಿದೆ. ವಾಹನ ನಿಲುಗಡೆ ನಿಷೇಧಿಸಲಾಗಿದೆ ಹಾಗೂ ಅಲ್ಲಿರುವ ಹೊಟೇಲ್, ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ.

ಕಿಗ್ಗಾದಲ್ಲಿ 213.4 ಮಿ.ಮೀ ಹಾಗೂ ಶೃಂಗೇರಿಯಲ್ಲಿ 178.0ಮಿ.ಮೀ ಮಳೆಯಾದ ಬಗ್ಗೆ ವರದಿಯಾಗಿದೆ. ಬುಧವಾರ ಮಳೆಯ ಜೊತೆ ಗಾಳಿಯ ಅಬ್ಬರವಿದ್ದು ಹಲವು ಕಡೆ ಅಡಿಕೆ ಮರಗಳು ಧರೆಗೆ ಉರುಳಿವೆ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳು ಕುಸಿದಿದ್ದು, ಎರಡು ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮೆಸ್ಕಾಂ ಸಿಬ್ಬಂದಿಯವರು ಮಳೆಯಲ್ಲಿ ಎಡೆಬಿಡದೆ ಕಾರ್ಯನಿರ್ವಹಿಸುತ್ತಿದ್ದಾರೆ.

ಮೆಣಸೆ ಗ್ರಾ.ಪಂ ವ್ಯಾಪ್ತಿಯ ಕಲ್ಕಟ್ಟೆ ಮಾರ ಅವರ ಮನೆ ಗಾಳಿಯ ಹೊಡೆತಕ್ಕೆ ಎದುರುಗಡೆ ಛಾವಣಿ ಸಮಪೂರ್ಣ ಕುಸಿದು ಮನೆಗೆ ಹಾನಿಯಾಗಿದೆ. ಅವರ ಮಗ ಶ್ರೀದುರ್ಗಾ ಅವರಿಗೆ ಪೆಟ್ಟಾಗಿದ್ದು ಸರಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುತೂಗೋಡು ಗ್ರಾಮದಿಂದ ಕಿಗ್ಗಾ ಹೋಬಳಿ ಮಲ್ನಾಡು ಗ್ರಾಮಕ್ಕೆ ಹೋಗುವ ಹಾದಿಯಲ್ಲಿ ಮರಬಿದ್ದು ವಾಹನ ಸಂಚಾರಕ್ಕೆ ತಡೆ ಉಂಟಾಗಿದೆ. ಅಲ್ಲಿಯೇ ಸಮೀಪವಿದ್ದ ಚಂದ್ರಮ್ಮ ಅವರಿಗೆ ಸೇರಿದ ಅಡಿಕೆ ಹಾಗೂ ಕಾಫಿ ಗಿಡಗಳಿಗೆ ಹಾನಿಯಾಗಿವೆ. ಸಣ್ಣಾ ಆನೆಗುಂದ ಮಂಜುನಾಥ್ ಮನೆಯ ಸಮೀಪ ಧರೆ ಕುಸಿದಿದೆ. ಕೆರೆ ಗ್ರಾ.ಪಂ ವ್ಯಾಪ್ತಿಯ ಚಿಂಚೋಳ್ಳಿಯಲ್ಲಿ ವಿದ್ಯುತ್ ಕಂಬದ ಮೇಲೆ ಮರಬಿದ್ದರೂ ಯಾವುದೇ ಹಾನಿಯಾಗಿಲ್ಲ. ಉಡುಪಿಗೆ ಸಂಪರ್ಕ ಕಲ್ಪಿಸುವ ಮಾನಗಾರು ಸಮೀಪದ ಹೆದ್ದಾರಿ ರಸ್ತೆ ನೀರು ಹಾಗೂ ಮಣ್ಣಿನಿಂದ ಆವೃತ್ತಗೊಂಡಿದೆ. ಹಳ್ಳ-ಕೊಳ್ಳಗಳು ಭರ್ತಿಯಾಗಿವೆ.

ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ತೋಟಗಳ ಕಾರ್ಯ ಸ್ಥಗಿತಗೊಂಡಿದೆ. ತಾಲೂಕಿನಲ್ಲಿ ಅಡಿಕೆ ಮರಗಳಿಗೆ ಮೊದಲ ಹಂತದ ಜೌಷಧಿ ಸಿಂಪಡಣೆ ಮುಗಿದಿದ್ದು, ಎರಡನೇ ಬಾರಿ ಬೋರ್ಡೋ ಸಿಂಪಡಣೆಗೆ ಮಳೆ ಅಡ್ಡಿ ಉಂಟು ಮಾಡುತ್ತಿದೆ. ಭತ್ತದ ಗದ್ದೆಯ ಕೃಷಿ ಚಟುವಟಿಕೆ ಚುರುಗೊಂಡಿದೆ.

ತಹಶೀಲ್ದಾರ್ ಯರ್ರಿಸ್ವಾಮಿ ತಮ್ಮ ಸಿಬ್ಬಂದಿಗಳೊಂದಿಗೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿದರು.

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆ ಹಿನ್ನೆಲೆ ಎಲ್ಲಾ ತಾಲೂಕುಗಳಲ್ಲೂ ಕಂಟ್ರೋಲ್ ರೂಂ ತೆರೆಯಲಾಗಿದ್ದು ದಿನದ 24 ಗಂಟೆಯೂ ಕೆಲಸ ನಿರ್ವಹಿಸಲಿದೆ.

ಚಿಕ್ಕಮಗಳೂರು ತಾಲೂಕು-08262 231392

ಮೂಡಿಗೆರೆ- 08263 220204

ಕೊಪ್ಪ- 08265 221047

ಶೃಂಗೇರಿ- 08265- 250135

ತರೀಕೆರೆ- 08261 222259

ಎನ್.ಆರ್. ಪುರ - 08266 220128

ಕಡೂರು- 08267 221250

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News