ಬೆಳಗಾವಿಯಲ್ಲಿ ಪ್ರವಾಹ- ರಕ್ಷಣಾ ಕಾರ್ಯ ಚುರುಕು: ಸೇನೆ, 3 ಹೆಲಿಕಾಪ್ಟರ್ ನಿಯೋಜನೆ

Update: 2019-08-09 14:24 GMT

ಬೆಳಗಾವಿ, ಆ.9: ನೆರೆಯ ಮಹಾರಾಷ್ಟ್ರದಿಂದ ಬಿಡಲಾಗುತ್ತಿರುವ ಭಾರೀ ಪ್ರಮಾಣದ ನೀರು ಹಾಗೂ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಹದಿನಾಲ್ಕು ತಾಲೂಕುಗಳಲ್ಲೂ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇಂದಿನ(ಆಗಸ್ಟ್ 9)ವರೆಗೆ ಒಟ್ಟು 323 ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಇದುವರೆಗೆ 28,103 ಕುಟುಂಬಗಳನ್ನು ಸ್ಥಳಾಂತರಿಸಿ, ಪರಿಹಾರ ಕೇಂದ್ರಗಳಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.

323 ಗ್ರಾಮಗಳು ಹಾಗೂ ಕೆಲವು ಪಟ್ಟಣ ಪ್ರದೇಶಗಳೂ ಸೇರಿದಂತೆ ಒಟ್ಟಾರೆ 1,45,368 ಜನರನ್ನು ಸ್ಥಳಾಂತರಿಲಾಗಿದೆ. ಅದೇ ರೀತಿ ಪ್ರವಾಹಕ್ಕೆ ಸಿಲುಕಿದ 43,972 ಜಾನುವಾರುಗಳನ್ನು ಸ್ಥಳಾಂತರಿಸುವುದರ ಜತೆಗೆ ಸೂಕ್ತ ರಕ್ಷಣೆ ಮತ್ತು ಮೇವಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.

327 ಪರಿಹಾರ ಕೇಂದ್ರ ಸ್ಥಾಪನೆ: ಜಿಲ್ಲೆಯ ಎಲ್ಲ ಹದಿನಾಲ್ಕು ತಾಲೂಕುಗಳಲ್ಲಿ ಇದುವರೆಗೆ 327 ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಊಟೋಪಹಾರ, ವೈದ್ಯಕೀಯ ಸೌಲಭ್ಯ ಸೇರಿದಂತೆ ಎಲ್ಲ ಬಗೆಯ ವ್ಯವಸ್ಥೆ ಒದಗಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಈ ಪರಿಹಾರ ಕೇಂದ್ರಗಳಲ್ಲಿ ಮಕ್ಕಳು ಸೇರಿದಂತೆ 82,425 ಜನರು ಆಶ್ರಯ ಪಡೆದುಕೊಂಡಿದ್ದಾರೆ. ಅದೇ ರೀತಿ ರಕ್ಷಿಸಲಾದ ಹಾಗೂ ಸ್ಥಳಾಂತರಿಸಲಾದ ಜಾನುವಾರುಗಳ ಪೈಕಿ 26,750 ಜಾನುವಾರುಗಳಿಗೆ ಪರಿಹಾರ ಕೇಂದ್ರದಲ್ಲಿ ಆಶ್ರಯ ಒದಗಿಸಲಾಗಿದೆ ಎಂದು ಅವರು ಹೇಳಿದರು.

ಚಿಕ್ಕೋಡಿಯಲ್ಲಿ ಹೆಚ್ಚು ಸ್ಥಳಾಂತರ: ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನಲ್ಲಿ ಅತೀ ಹೆಚ್ಚು 6953 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಅಥಣಿ-4351, ರಾಯಭಾಗ-4349, ಖಾನಾಪುರ-236, ಹುಕ್ಕೇರಿ-975, ಗೋಕಾಕ-1082, ಕಾಗವಾಡ-4599, ನಿಪ್ಪಾಣಿ-2973, ಮೂಡಲಗಿ-1100, ಬೆಳಗಾವಿ-546, ಬೈಲಹೊಂಗಲ-38, ರಾಮದುರ್ಗ-628, ಸವದತ್ತಿ-631 ಹಾಗೂ ಕಿತ್ತೂರು-27 ಕುಟುಂಬಗಳನ್ನು ಆಗಸ್ಟ್ 9ರವರೆಗೆ ಸ್ಥಳಾಂತರಿಸಲಾಗಿದೆ.

3 ಹೆಲಿಕಾಪ್ಟರ್ ನಿಯೋಜನೆ: ಪ್ರವಾಹಕ್ಕೆ ಸಿಲುಕಿರುವ ಜನರ ರಕ್ಷಣೆಗೆ ಸೇನೆಯ ಮೂರು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ. ಹೆಲಿಕಾಪ್ಟರ್‌ಗಳನ್ನು ಬಳಸಿಕೊಂಡು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿರುವ ನೌಕಾ ಮತ್ತು ವಾಯುಸೇನೆಯ ಯೋಧರು ಆ.8ರಂದು ಒಟ್ಟು 32 ಜನರನ್ನು ರಕ್ಷಿಸಿದ್ದಾರೆ.

ಹಡಗಿನಾಳ-7, ಸುನ್ನಾಳ-18, ಬಾಗಲಕೋಟೆ ಜಿಲ್ಲೆಯ ಮುಧೋಳ-1 ಹಾಗೂ ರೂಗಿ-6 ಜನರನ್ನು ರಕ್ಷಿಸಿದ್ದು, ಕಾರ್ಯಾಚರಣೆ ಇಂದೂ ಮುಂದುವರಿದಿದೆ. ಇಂದು ರಾಮದುರ್ಗ ತಾಲೂಕಿನ ಹಂಪಿಹೊಳಿ ಮತ್ತು ಬಾಗಲಕೋಟೆಯ ಮುಧೋಳ ತಾಲೂಕಿನ ರೂಗಿಯಲ್ಲಿ ರಕ್ಷಣಾ ಕಾರ್ಯ ನಡೆಸಿದೆ.

ಆಹಾರ ಪೊಟ್ಟಣ ವಿತರಣೆ: ಪ್ರವಾಹದಿಂದಾಗಿ ಚಿಕ್ಕೋಡಿ ತಾಲ್ಲೂಕಿನ ಕೆಲ ಗ್ರಾಮಗಳು ನಡುಗಡ್ಡೆಯಂತಾಗಿದ್ದು, ಅಂತಹ ಪ್ರದೇಶಗಳಲ್ಲಿ ಹೆಲಿಕಾಪ್ಟರ್ ಮೂಲಕ ಆಹಾರ ಪೊಟ್ಟಣಗಳನ್ನು ವಿತರಿಸಲಾಗುತ್ತಿದೆ. ಸದಲಗಾ, ಇಂಗಳಿ, ಚಂದೂರ ಟೇಕ್, ಯಡೂರವಾಡಿ ಮತ್ತಿತರ ಕಡೆಗಳಲ್ಲಿ ಆಹಾರ ಪೊಟ್ಟಣ ಮತ್ತು ಕುಡಿಯುವ ನೀರಿನ ಬಾಟಲ್‌ಗಳನ್ನು ಸೇನಾ ಹೆಲಿಕಾಪ್ಟರ್ ಮೂಲಕ ಪೂರೈಸಲಾಗುತ್ತಿದೆ.

ಇದಲ್ಲದೇ ಬೆಳಗಾವಿ ನಗರದಲ್ಲಿಯೂ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿ, ಮಹಾನಗರ ಪಾಲಿಕೆಯ ವತಿಯಿಂದ ನಿರ್ವಹಿಸಲಾಗುತ್ತಿದೆ. ಸೇನೆ, ಪೊಲೀಸ್, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಗೃಹರಕ್ಷಕದಳ ಸೇರಿದಂತೆ ಸರಕಾರದ ಎಲ್ಲ ಇಲಾಖೆಯ ಅಧಿಕಾರಿಗಳು ನಿರಂತರವಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿ ಕೊಂಡಿದ್ದಾರೆ.

ಜನರು ಆತಂಕಕ್ಕೆ ಒಳಗಾಗದೇ ತುರ್ತು ಸಂದರ್ಭಗಳಲ್ಲಿ ಸಹಾಯವಾಣಿ ಕೇಂದ್ರಗಳು ಅಥವಾ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿಕೊಂಡಿದ್ದಾರೆ.

ಸಹಾಯವಾಣಿ-ನಿಯಂತ್ರಣ ಕೊಠಡಿ ಸಂಖ್ಯೆ: ಜಿಲ್ಲಾಧಿಕಾರಿ ಕಚೇರಿ- 0831-2407290, ಪೊಲೀಸ್ ವರಿಷ್ಠಾಧಿಕಾರಿ ಕಚೇರಿ-0831-2405231, ಚಿಕ್ಕೋಡಿ-08338-272228, ರಾಯಭಾಗ: 08331-225482, ಅಥಣಿ: 08289-251146, ನಿಪ್ಪಾಣಿ: 08338-220395, ಈ ಸಂಖ್ಯೆಗಳಿಗೆ ಸಂಪರ್ಕಿಸಿ ಸಂತ್ರಸ್ತರು ತಮ್ಮ ಸಮಸ್ಯೆಗಳನ್ನು ತಿಳಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News