ಮೂಡಿಗೆರೆ: ರಕ್ಷಿಸಿದ ಯೋಧರನ್ನು ರಾಖಿ ಕಟ್ಟಿ ಕಣ್ಣೀರಿಟ್ಟು ಬೀಳ್ಕೊಟ್ಟ ಪ್ರವಾಹ ಸಂತ್ರಸ್ಥರು

Update: 2019-08-13 14:45 GMT

ಚಿಕ್ಕಮಗಳೂರು,ಆ.13: ಜಿಲ್ಲಾದ್ಯಂತ ವಾರದಿಂದ ಸುರಿದ ಬಾರಿ ಮಳೆಗೆ ಮಲೆನಾಡಿನ ಅನೇಕ ಗ್ರಾಮಗಳು ಪ್ರವಾಹ ಪೀಡಿತವಾಗಿತ್ತು. ಮೂಡಿಗೆರೆ ತಾಲೂಕಿನ ಅಲೇಖಾನ್, ಹೊರಟ್ಟಿ,  ಮಲೆಮನೆ, ಜಾವಳಿ, ಮಧುಗುಂಡಿ,  ಸುಂಕಸಾಲೆ, ನೀಡುವಾಳೆ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಗುಡ್ಡ ಕುಸಿದು ಗ್ರಾಮಸ್ಥರು ನಡುಗಡ್ಡೆಯಲ್ಲಿ ಸಿಲುಕಿಕೊಂಡು ಅಪಾಯದಲ್ಲಿದ್ದರು. ಅಪಾಯದಲ್ಲಿದ್ದ ಜನರನ್ನು ಸುರಕ್ಷಿತವಾಗಿ ಅರೆಸೇನಾ ಯೋಧರ ಪಡೆ ಕರೆತಂದು ಅಪಾಯದಲ್ಲಿದ್ದ ಎಲ್ಲರನ್ನೂ ರಕ್ಷಿಸಿ ಮಂಗಳವಾರ ಮೂಡಿಗೆರೆಯಿಂದ ನಿರ್ಗಮಿಸಿದರು.

ಯೋಧರ ಪಡೆ ಮೂಡಿಗೆರೆಯಿಂದ ನಿರ್ಗಮಿಸುತ್ತಿದ್ದಂತೆ ತಮ್ಮ ಜೀವ ಉಳಿಸಿದ ವೀರ ಯೋಧರಿಗೆ ರಾಖಿಕಟ್ಟಿ ಕಣ್ಣೀರು ಹಾಕುತ್ತಲೇ ಬೀಳ್ಕೋಟ್ಟರು. ನಿಮ್ಮಿಂದ ನಮ್ಮ ಜೀವ ಉಳಿದಿದೆ ಎಂದು ಗ್ರಾಮಸ್ಥರು ಕಣ್ಣೀರು ಹಾಕಿದರು. ಪ್ರತಿಯೊಬ್ಬ ಸೈನಿಕರಿಗೂ ಗ್ರಾಮಸ್ಥರು ರಾಖಿ ಕಟ್ಟಿದರು. ಸೈನಿಕರು ತಂದಿದ್ದ ಹಣ್ಣು, ಬಿಸ್ಕೆಟ್‍ಗಳನ್ನು ಸಂತ್ರಸ್ತರಿಗೆ ಹಂಚಿದರು. ಭಾರತ್ ಮಾತಾಕೀ ಜೈ ಎಂದು ನೂರಾರು ಜನರು ಘೋಷಣೆ ಕೂಗಿದರು. ಇಂಡಿಯನ್ ಆರ್ಮಿ ಸದಾ  ನಿಮ್ಮ ಜೊತೆ ಇರುತ್ತೆ. ನೀವು ಯಾವಾಗ ಕರೆದರೂ ನಿಮ್ಮ ಸೇವೆಗೆ ನಾವು ಸದಾ ಸಿದ್ಧ ಎಂದು ಸಂತ್ರಸ್ತರಿಗೆ ಅಭಯ ನೀಡಿದ ಯೋಧರು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News