ವೃದ್ಧೆ ಮೇಲೆ ಚಿರತೆ ದಾಳಿ: ತೀವ್ರ ಗಾಯ

Update: 2019-08-17 17:22 GMT

ಹಾಸನ, ಆ.17: ವೃದ್ಧೆಯೋರ್ವರ ಮೇಲೆ ಚಿರತೆ ದಾಳಿ ನಡೆಸಿದ ಪರಿಣಾಮ ತಲೆ ಸೇರಿದಂತೆ ದೇಹದ ವಿವಿಧ ಭಾಗಗಳ ಮೇಲೆ ತೀವ್ರ ಗಾಯಗಳಾದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಅವರನ್ನು ಹಾಸನ ನಗರದ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಗಿದೆ.

ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿ ವಾಸವಾಗಿರುವ ರಂಗಮ್ಮ (70) ಎಂಬವರೇ ಚಿರತೆ ದಾಳಿಗೆ ಗಾಯಗೊಂಡು ಆಸ್ಪತ್ರೆ ಸೇರಿದವರು. ಬೆಳಗ್ಗೆ 4 ಗಂಟೆ ಸಮಯದಲ್ಲಿ ಮೂತ್ರ ವಿಸರ್ಜನೆಗೆಂದು ಮನೆಯಿಂದ ಹೊರ ಬಂದಿದ್ದು, ಈ ವೇಳೆ ಚಿರತೆ ರಂಗಮ್ಮ ಮೇಲೆ ದಾಳಿ ನಡೆಸಿದೆ. ಕೂಗಾಟ ಕೇಳಿ ಹೊರಬಂದ ಅವರ ಮಗ ಮತ್ತು ಮೊಮ್ಮಗಳು ರಂಗಮ್ಮರನ್ನು ರಕ್ಷಿಸಿದ್ದಾರೆ. ತಕ್ಷಣ ಹಾಸನ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದ್ದು, 28 ಹೊಲಿಗೆ ಹಾಕಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಪರಿಶೀಲಿಸಿ ವಿವರ ಪಡೆದರು. 

ಜಿಲ್ಲಾ ಆಸ್ಪತ್ರೆಗೆ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ ಹಾಗೂ ಇತರರು ಆಗಮಿಸಿ ಆರೋಗ್ಯ ವಿಚಾರಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News