ವಿವಾಹಿತ ಯುವಕ ನಾಪತ್ತೆ: ದೂರು ದಾಖಲು

Update: 2019-08-17 17:40 GMT

ಮಡಿಕೇರಿ, ಆ.17: ದೂರದ ಒಡಿಶಾ ರಾಜ್ಯದಿಂದ ಉದ್ಯೋಗ ಅರಸಿ ಮಡಿಕೇರಿಗೆ ಬಂದಿದ್ದ ಯುವಕನೋರ್ವ ಮತಾಂತರಗೊಂಡು ಇಲ್ಲಿನ ಮಹಿಳೆಯೊಬ್ಬರನ್ನು ವಿವಾಹವಾಗಿ ಇದೀಗ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ನಗರದ ತ್ಯಾಗರಾಜ ನಗರದ ಮಹಿಳೆ ಈ ಸಂಬಂಧ ನಗರ ಠಾಣೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಒಡಿಶಾ ರಾಜ್ಯದ ಶೇಷಾದ್ರಿ ಬಾದಿ ಎಂಬವರ ಪುತ್ರ ಸತ್ಯಪ್ರಕಾಶ್ ಬಾದಿ(25) ಎಂಬವರು ಇಲ್ಲಿಗೆ ಉದ್ಯೋಗ ಅರಸಿ ಬಂದಿದ್ದರು. ಈ ವೇಳೆ ಸ್ಥಳೀಯ ಅನ್ಯಕೋಮಿನ ಮಹಿಳೆಯ ಪರಿಚಯವಾಗಿ, ಕೇರಳದಲ್ಲಿ 4 ತಿಂಗಳು ತರಬೇತಿ ಪಡೆದು ಶಹಾಲ್ ಆಗಿ ಹೆಸರು ಬದಲಿಸಿಕೊಂಡು ಇಸ್ಲಾಂ ಪದ್ದತಿಯಂತೆ ದೂರುದಾರ ಮಹಿಳೆಯನ್ನು ವಿವಾಹ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

ಸುಮಾರು 2 ವರ್ಷ ಆಕೆಯೊಂದಿಗೆ ಸಂಸಾರ ನಡೆಸಿರುವ ಈ ವ್ಯಕ್ತಿ 7.6.2019 ರಂದು ಸ್ಥಳೀಯ ರೆಸಾರ್ಟ್‍ವೊಂದರಲ್ಲಿ ಕೆಲಸಕ್ಕೆಂದು ತೆರಳುವುದಾಗಿ ಹೇಳಿ ಮನೆಯಿಂದ ಹೋದವನು ಮರಳಿ ಮನೆಗೆ ಹಿಂದಿರುಗಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮಾತ್ರವಲ್ಲದೇ, ಈ ಬಗ್ಗೆ ಒಡಿಶಾ ರಾಜ್ಯದಲ್ಲಿ ಸಂಪರ್ಕಿಸಿದಾಗ ಸತ್ಯಪ್ರಕಾಶ್ ಹುಟ್ಟೂರಿಗೂ ತಲುಪಿಲ್ಲ ಎಂದು ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಸ್ಥಳೀಯ ಮಹಿಳೆ ನಗರ ಪೊಲೀಸರಿಗೆ ದೂರು ಸಲ್ಲಿಸಿದ್ದು, ಪೊಲೀಸ್ ಠಾಣೆಯಲ್ಲಿ ಸತ್ಯಪ್ರಕಾಶ್ ಬಾದಿ ಅಲಿಯಾಸ್ ಶಹಾಲ್ ನಾಪತ್ತೆ ಕುರಿತು ಮೊಕದ್ದಮೆ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News