ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ವರ್ಗಾವಣೆ ಆದೇಶ ರದ್ದು

Update: 2019-08-22 16:15 GMT

ಮೈಸೂರು,ಆ.22: ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಅಭಿರಾಮ್ ಜಿ.ಶಂಕರ್ ಅವರ ವರ್ಗಾವಣೆ ಆದೇಶವನ್ನು ರಾಜ್ಯ ಸರಕಾರ ರದ್ಧುಗೊಳಿಸಿದೆ.

ಸ್ಥಳೀಯ ಶಾಸಕರು ಮತ್ತು ಸಚಿವ ಆರ್.ಅಶೋಕ್ ಅವರ ಮನವಿ ಮೇರೆಗೆ ವರ್ಗಾವಣೆ ಆದೇಶವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರನ್ನು ತಕ್ಷಣಕ್ಕೆ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿತ್ತು. ಇವರ ಜಾಗಕ್ಕೆ ಬೆಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಹೆಚ್ಚುವರಿ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಿತೀಶ್ ಪಾಟೀಲ್ ಅವರನ್ನು ತಕ್ಷಣ ಅಧಿಕಾರ ವಹಿಸಿಕೊಳ್ಳುವಂತೆ ಆದೇಶಿಸಿ ಸರಕಾರ ಆದೇಶ ನೀಡಿತ್ತು.

ಇದರ ಬೆನ್ನಲ್ಲೇ ಸ್ಥಳೀಯ ಶಾಸಕರುಗಳು ಮುಖ್ಯಮಂತ್ರಿಗಳಿಗೆ ಅಭಿರಾಮ್ ಜಿ.ಶಂಕರ್ ಅವರನ್ನು ದಸರಾ ಮುಗಿಯುವವರೆಗೂ ಮುಂದುವರೆಸುವಂತೆ ಮನವಿ ಮಾಡಿದ್ದರು. ಹಾಗಾಗಿ ಅವರನ್ನು ಮೈಸೂರು ಜಿಲ್ಲಾಧಿಕಾರಿಯನ್ನಾಗಿ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News